ಬಳ್ಳಾರಿ: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಪ್ರವೇಶ ಶುಲ್ಕವನ್ನು 5% ಹೆಚ್ಚಿಸುವಂತೆ ಉನ್ನತ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಸರ್ಕಾರಿ ಕಾಲೇಜುಗಳ ಅಭಿವೃದ್ಧಿಗೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣವನ್ನು ಬಳಸುವಂತೆ ತಿಳಿಸಲಾಗಿದೆ. ಅಂದರೆ, ಖಾಸಗಿ ಕಾಲೇಜಿಗೂ ಸರ್ಕಾರಿ ಕಾಲೇಜಿಗೂ ಏನು ವ್ಯತ್ಯಾಸ ಉಳಿಯಿತು? ಸರ್ಕಾರಿ ಕಾಲೇಜುಗಳ ಆರ್ಥಿಕ ಹೊಣೆಗಾರಿಕೆಯಿಂದ ಕೈತೊಳೆದುಕೊಂಡು ಖಾಸಗೀಕರಣ ಗೊಳಿಸಲು ಇದು ಸರ್ಕಾರದ ಮೊದಲ ಹೆಜ್ಜೆಯೇ ಎಂಬುದು ರಾಜ್ಯದ ವಿದ್ಯಾರ್ಥಿಗಳ ಪ್ರಶ್ನೆ!
ಈಗಾಗಲೇ ಶಿಕ್ಷಣಕ್ಕೆ; ಅದರಲ್ಲೂ ಉನ್ನತ ಶಿಕ್ಷಣಕ್ಕೆ ಸರ್ಕಾರವು ಅತಿ ಕಡಿಮೆ ಅನುದಾನ ನೀಡುತ್ತಿದ್ದು ನಿವೃತ್ತಿ ಹೊಂದಿದವರಿಗೆ ಪಿಂಚಣಿ ನೀಡಲು ಕೂಡ ರಾಜ್ಯದ ವಿಶ್ವವಿದ್ಯಾಲಯಗಳ ಬಳಿ ಹಣವಿಲ್ಲ! ರಾಜ್ಯದ ಏಳು ವಿಶ್ವವಿದ್ಯಾನಿಲಯಗಳಂತೂ ಮೂಲಭೂತ ಸೌಲಭ್ಯ ಹಾಗೂ ಬೋಧಕರ ಕೊರತೆಯಿಂದ ಮುಚ್ಚುವ ಹಂತದಲ್ಲಿವೆ. ವಿದ್ಯಾರ್ಥಿಗಳು ನೀಡುವ ಪ್ರವೇಶ ಶುಲ್ಕದ ಮೇಲೆ ಅವಲಂಬಿತವಾಗಿರುವ ವಿಶ್ವವಿದ್ಯಾಲಯಗಳ ದುಬಾರಿ ಶುಲ್ಕದಿಂದಾಗಿ ಈಗಾಗಲೇ ಗಣನೀಯ ಪ್ರಮಾಣದ ಪದವಿ ವಿದ್ಯಾರ್ಥಿಗಳು ಪದವಿ ಶುಲ್ಕವನ್ನು ಬರಿಸಲು ಕೆಲಸಗಳಿಗೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿಶ್ವವಿದ್ಯಾಲಯಗಳು ಪ್ರವೇಶ ಶುಲ್ಕದಲ್ಲಿ ಶೇ 5%ರಷ್ಟು ಹೆಚ್ಚಳಕ್ಕೆ ಮುಂದಾಗಿರುವುದು ದೊಡ್ಡ ಸಂಖ್ಯೆಯ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಶಾಶ್ವತವಾಗಿ ಉನ್ನತ ಶಿಕ್ಷಣದಿಂದ ದೂರ ತಳ್ಳಿದಂತಾಗುತ್ತದೆ. ಕೂಡಲೇ ಇದನ್ನು ಕೈಬಿಡಬೇಕು ಮತ್ತು ವಿಶ್ವವಿದ್ಯಾಲಯಗಳ ಹಣಕಾಸು ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರವು ಹೆಚ್ಚಿನ ಅನುದಾನ ನೀಡಬೇಕೆಂದು ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ.”