ಬೆಳಗಾವಿ: ಕಡೋಲಿ ಗ್ರಾಪಂಗೆ ವ್ಯಾಪ್ತಿಯಲ್ಲಿ ಬರುವ ದೇವಗಿರಿ ಗ್ರಾಮದಲ್ಲಿನ ಲಿಂಗಾಯತ ಸಮಾಜದ ಸ್ಮಶಾನಭೂಮಿಯನ್ನು ಕಬಳಿಸಲು ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿ ದೇವಗಿರಿ ಗ್ರಾಮಸ್ಥರು ಸ್ಮಶಾನಭೂಮಿಯಲ್ಲೇ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ದೇವಗಿರಿ ಗ್ರಾಮಸ್ಥರು ಮಾತನಾಡಿ, ದೇವಗಿರಿ ಗ್ರಾಮದ ಸರ್ವೇ ನಂ 123/8ರಲ್ಲಿ ಬರುವ 1 ಎಕರೆ 16 ಗುಂಟೆಯ ಭೂಮಿಯನ್ನು ಲಿಂಗಾಯತ ಸಮಾಜದ ಜನರಿಗೆ ಸ್ಮಶಾನಕ್ಕೆ ಮೀಸಲಾಗಿತ್ತು. ಕಳೆದ ಸುಮಾರು ವರ್ಷಗಳಿಂದ ದೇವಗಿರಿ ಗ್ರಾಮದ ಜನರು ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರಕ್ಕೆ ಈ ಜಾಗ ಬಳಸಿಕೊಳ್ಳುತ್ತಿದ್ದಾರೆ. ಈ ವರ್ಷ ಸಹ ಇಲ್ಲಿ ಅನೇಕ ಶವಗಳ ಅಂತ್ಯಕ್ರಿಯೆ ಮಾಡಲಾಗಿದೆ. ಈಗ ವ್ಯಕ್ತಿಯೊಬ್ಬ ಈ ಜಾಗ ತನ್ನದೆಂದು ತಕರಾರು ತೆಗೆದು ಅಡಚಣೆ ಉಂಟುಮಾಡಿ ಈ ಸ್ಮಶಾನ ಭೂಮಿಯನ್ನು ಕಬಳಿಸಲು ಯತ್ನ
ಮಾಡುತ್ತಿದ್ದಾನೆ ಎಂದು ಆರೋಪಿಸಿದರು.
ಈ ಜಾಗ ಸ್ಮಶಾನಕ್ಕೆ ಮೀಸಲು ಎಂದು ನಮ್ಮ ಹಿರಿಯರು ಈ ಜಾಗ ಸುಮಾರು ವರ್ಷಗಳ ಹಿಂದೇಯೇ ಗುರುತಿಸಿದ್ದಾರೆ. ಆದರೆ ಈಗ ವ್ಯಕ್ತಿಯೊಬ್ಬ ಈ ಜಾಗ ನನ್ನ ಪಿತ್ರಾರ್ಜಿತ ಆಸ್ತಿ ಎಂದು ಆರೋಪ ಮಾಡಿ ಲಿಂಗಾಯತ ಸಮಾಜದ ಸ್ಮಶಾನ ಭೂಮಿ ಕಬಳಿಸಲು ಯತ್ನ ಮಾಡುತ್ತಿದ್ದಾನೆ. ಇದು ಸರಿಯಲ್ಲ. ಶೀಘ್ರವೇ ಈ ಆರೋಪ ಬಿಟ್ಟು ಲಿಂಗಾಯತ ಸಮುದಾಯದ ಜನರಿಗೆ ಸ್ಮಶಾನ ಭೂಮಿಯನ್ನು ಯತಾವತ್ತಾಗಿ ಮುಂದುವರೆಸಿಕೊಂಡು ಹೋಗಲು ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಸಚಿವರ ಆಪ್ತ ಸಹಾಯಕರ ಮುಂದೆ ಅಳಲು ತೋಡಿಕೊಂಡ ಗ್ರಾಮಸ್ಥರು: ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರ ಆಪ್ತ ಸಹಾಯಕ ಮಲಗೌಡ ಪಾಟೀಲ್ ಅವರ ಬಳಿ ತಮ್ಮ ನೋವು ತೊಡಿಕೊಂಡ ದೇವಗಿರಿ ಗ್ರಾಮಸ್ಥರು, ದೇವಗಿರಿ ವ್ಯಾಪ್ತಿಯ ಕಡೋಲಿ ಗ್ರಾಪಂನ ರಿ.ಸ.ನಂ- 123/8 ರಲ್ಲಿ ಸಂಬಂಧಿಸಿದ ಭೂಮಿಯನ್ನು ಕಳೆದ ಮೂರ್ನಾಲ್ಕೂ ತಲಮಾರಿನಿಂದ ಈ ಭೂಮಿಯನ್ನು ನಾವು ಸ್ಮಶಾನ ಭೂಮಿಯಾಗಿ ಬಳಕೆ ಮಾಡುತ್ತಿದ್ದೇವೆ. ಹೀಗಾಗಿ ಮುಂದೆಯೂ ನಮಗೆ ಈ ಜಾಗವನ್ನು ಬಳಕೆ ಮಾಡಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು. ಈ ಸಮಸ್ಯೆ ಆಲಿಸಿದ ಸಚಿವರ ಆಪ್ತ ಸಹಾಯಕ ಮಲಗೌಡಾ ಪಾಟೀಲ ಅವರು ಗ್ರಾಮಸ್ಥರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ಗೌಡಪ್ಪ ಶಿವನಗೌಡ ಪಾಟೀಲ, ಬಾಬುರಾವ ಪಾಟೀಲ, ಬಾಬು ಪಾಟೀಲ, ನಿಂಗಪ್ಪ ಪಾಟೀಲ, ಪಕ್ಕಿರಪ್ಪ ಸದಾವರ, ತಿಪ್ಪಣ್ಣಾ ಪಕ್ಕಿರನಾಯಕ, ಬಾಬು ಬಡಿಗೇರ, ಮಂಜುಳಾ ಅಂಕಿ, ರೇಖಾ ಸುತಾರ ಸೇರಿದಂತೆ ದೇವಗೀರಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.