ಮೂಡಲಗಿ : ಬಿಟಿಟಿ ಕಮೀಟಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕೆಲವರು ಆರೋಪ ಮಾಡುತ್ತಿದ್ದು, ಯಾವುದೇ ಭಿನ್ನಾಪ್ರಾಯವಿಲ್ಲದೆ ಮಾತುಕತೆಯ ಮೂಲಕ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳೋಣ ಎಂದು ಬಿಟಿಟಿ ಕಮೀಟಿಯ ಪ್ರಭಾರಿ ಅಧ್ಯಕ್ಷ ಮಲ್ಲಿಕಜಾನ್ ಕಳ್ಳಿಮನಿ ಹೇಳಿದರು.
ಸೋಮವಾರದಂದು ಪಟ್ಟಣದ ಜಾಮಿಯಾ ಮಸೀದಿ ಆವರಣದಲ್ಲಿ ಬಿಟಿಟಿ ಕಮೀಟಿ ಆಯೋಜಿಸಿದ್ದ ಕಮೀಟಿಯ ಲೆಕ್ಕಪತ್ರದ ವಿವರಣೆ ನೀಡಲು ಕರೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜಾಮಿಯಾ ಮಸೀದಿ ಕಟ್ಟಡ ನಿರ್ಮಾಣಕ್ಕಾಗಿ ೩೧ಮೇ ೨೦೨೫ರ ಅಂತ್ಯಕ್ಕೆ ರೂ ೬೭.೮೫ಲಕ್ಷ ಜಮೆಯಾಗಿದ್ದು, ಇನ್ನೂ ರೂ೨೯.೦೩ಲಕ್ಷ ಸಂದಾಯವಾಗಬೇಕು. ಇತರೆ ರೂಪದಲ್ಲಿ ಸಂಗ್ರಹವಾದ ರೂ೨೪.೫೪ಲಕ್ಷ ಸೇರಿದಂತೆ ಒಟ್ಟು ರೂ ೯೨.೪೦ಲಕ್ಷ ಹಣದಲ್ಲಿ ಮಸೀದಿ ಕಟ್ಟಡಕ್ಕಾಗಿ ರೂ ೯೧.೦೫ಲಕ್ಷ ಬಳಸಲಾಗಿದ್ದು, ಮಿಕ್ಕ ರೂ ೨.೨೫ಲಕ್ಷ ಬ್ಯಾಂಕ್ ಖಾತೆಯಲ್ಲಿ ಜಮಾ ಇದೆ ಎಂದರು.
ಕಮೀಟಿ ಅಧೀನದಲ್ಲಿ ಇನ್ನೊಂದು ಲೆಕ್ಕಪತ್ರ ವಿಭಾಗವಿದ್ದು, ಕೆಲಸ ಮಾಡುವ ಮೌಲಾನಾಗಳು ಸೇರಿದಂತೆ ಇತರೆ ಸಿಬ್ಬಂದಿಗಳಿಗೆ ಹಾಗೂ ಮಸೀದಿಯ ಇತರೆ ಖರ್ಚು ವೆಚ್ಚಗಳಿಗೆ ಸನ್ ೨೪-೨೫ನೇ ಸಾಲಿನ ಮಾರ್ಚ್ ಅಂತಕ್ಕೆ ಜಮೆಯಿದ್ದ ಒಟ್ಟು ೫.೬೮ಲಕ್ಷ ರೂಪಾಯಿಗಳಲ್ಲಿ ರೂ.೫.೫೧ಲಕ್ಷ ವ್ಯಯಿಸಿ ಮಿಕ್ಕ ರೂ೧೭ ಸಾವಿರ ಕಮೀಟಿಯ ಬಳಿ ಉಳಿದಿವೆ. ವಾರ್ಷಿಕ ಸರ್ವ ಸಾಧರಣ ಸಭೆ ಕರೆಯಬೇಕೆಂದರೆ ಅದು ನ್ಯಾಯಾಲಯದ ಹಂತದಲ್ಲಿ ಇರುವುದರಿಂದ ವಿಳಂಬವಾಗಿದ್ದು, ಅದನ್ನು ಪರಿಹರಿಸಿ ಅತೀ ಶೀಘ್ರವಾಗಿ ಸರ್ವ ಸಾಧರಣ ಸಭೆ ಆಯೋಜಿಸಲಾಗುವುದೆಂದು ಸಭಿಕರಿಗೆ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಪಿಎಸ್ಐ ಬಿ ಎಚ್ ಕುಂಬಾರ, ಬಿಟಿಟಿ ಕಮೀಟಿ ಕಾರ್ಯದರ್ಶಿ ಮದಾರ ಮುಗಟಖಾನ್, ಮುಖಂಡರಾದ ಅಮೀರಸಾಬ್ ಥರಥರಿ, ಹಸನಸಾಬ್ ಮುಗಟಖಾನ್, ಇಮ್ಮಾಹುಸೇನ ತಾಂಬೋಳಿ, ಹಾಜಿಸಾಬ್ ಪೀರಜಾದೆ, ಯಾಕೋಸಾಬ್ ತಾಂಬೋಳಿ, ರಶಿದ್ ಪಠಾನ್, ಗಪಾರ್ ಬಳಿಗಾರ, ಕಮೀಟಿ ಸದಸ್ಯರು, ಪೊಲೀಸ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


