ಸಂಕೇಶ್ವರ: ಸದ್ಯ ಮಾರ್ಚ್ ಆರಂಭವಾಗಿದೆ ಈ ತಿಂಗಳು ಆರ್ಥಿಕ ವಹಿವಾಟಿಗೆ ಮಹತ್ವದ ತಿಂಗಳು ಎಂದು ಪರಿಗಣಿಸಲಾಗಿದೆ. ಕಾರಣ ಸಾರ್ವಜನಿಕರು ಮಾಡಿರುವ ಸಾಲಗಳ ಮರುಪಾವತಿ ಮತ್ತು ಬಡ್ಡಿ ಪಾವತಿಗೆ ಕೊನೆಯ ತಿಂಗಳು ಆಗಿರುತ್ತದೆ. ಈ ಸಮಯದಲ್ಲಿ ರೈತರು ಬೆಳೆದ ಕಬ್ಬನ್ನು ಸರಿಯಾಗಿ ಕಾರ್ಖಾನೆಗೆ ಕಳುಹಿಸಿ ಈಗ ಸುಮಾರು ದಿನಗಳು ಕಳೆದರು ಕಾರ್ಖಾನೆಯಿಂದ ಬರಬೇಕಾದ ಕಬ್ಬಿಣ ಬಿಲ್ಲು ಸಮಯಕ್ಕೆ ಸಿಗದೇ ಎಲ್ಲ ರೈತರು ಬಹಳ ಸಂಕಷ್ಟ ಪಡುತ್ತಿದ್ದಾರೆ. ಇದನ್ನು ಮನಗಂಡು ಪ್ರಗತಿಪರ ರೈತ ಶ್ರೀ ಎಲ್. ಪಿ. ಶೆಂಡಗೆ ಅವರು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಕಳುಹಿಸಿದ್ದಾರೆ ಮತ್ತು ಸಕ್ಕರೆ ಕಾರ್ಖಾನೆಗಳು ಅಂತಿಮ ಕಬ್ಬಿನ ಬಿಲ್ಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಲು ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ.
ಕಾರ್ಖಾನೆಗಳು ಆರಂಭದಿಂದಲೂ ಕಬ್ಬಿನ ಬಿಲ್ಗಳನ್ನು ಸಕಾಲದಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಲು ಯಶಸ್ವಿ ಪ್ರಯತ್ನಗಳನ್ನು ಮಾಡಿವೆ. ಆದರೆ ಫೆಬ್ರವರಿ ಅಂತ್ಯದ ವೇಳೆಗೆ ಕೊನೆಯ ಬಿಲ್ ಜಮಾ ಆಗುವ ಸಾಧ್ಯತೆ ಇತ್ತು ಅದು ಇನ್ನು ವರೆಗೂ ಆಗಿರುವುದಿಲ್ಲ. ಅದರಿಂದ ರೈತರು ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾರೆ ಏಕೆಂದರೆ ಕಾರ್ಖಾನೆಗಳು ಕೊನೆಯ ಹಂತದಲ್ಲಿ ಸರಬರಾಜು ಮಾಡಿದ ಕಬ್ಬಿನ ಬಿಲ್ಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಿಲ್ಲ. ಈ ವಾರ್ಷಿಕ ಒಂದೇ ಒಂದು ಆದಾಯದ ಮೂಲವನ್ನು ಹೊಂದಿದ ಬಹುತೇಕ ರೈತರು ಸಕಾಲದಲ್ಲಿ ಬ್ಯಾಂಕುಗಳ ಸಾಲ ಮರುಪಾವತಿಸಲು ವಿಫಲರಾಗುವ ಸಾಧ್ಯತೆ ಇರುವುದು. ಮತ್ತು ಬ್ಯಾಂಕುಗಳು ಯಾವುದೇ ಕನಿಕರ ಇಲ್ಲದೆ ಹೆಚ್ಚಿನ ಬಡ್ಡಿ ಮತ್ತು ದಂಡವನ್ನು ರೈತರಿಂದ ವಸೂಲಿ ಮಾಡುವಲ್ಲಿ ಹಿಂದೆ ಸರಿಯುವುದಿಲ್ಲ ಎಂಬುದು ವಿಪರ್ಯಾಸವಾಗಿದೆ. ಆದ ಕಾರಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂದಿಸಿದ ಅಧಿಕಾರಿಗಳು ತಕ್ಷಣ ಆದೇಶ ಹೊರಡಿಸಿ ಒದಗಿರುವ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಶೆಂಡಗೆ ಒತ್ತಾಯಿಸಿದ್ದಾರೆ.


