ಬಳ್ಳಾರಿ: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನ್ಯಾಯಬೆಲೆ ಅಂಗಡಿ ವ್ಯಾಪಾರಿ ಸಂಘದಿಂದ ಜನವರಿ 6ರಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ಬಳ್ಳಾರಿ ಜಿಲ್ಲೆಯ ಸುಮಾರು 200 ನ್ಯಾಯಬೆಲೆ ಅಂಗಡಿ ಮಾಲೀಕರು ಕಮಿಷನ್ ಹಣ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಹಾಗೂ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಪಡಿತರ ವಿತರಕರಿದ್ದು, ಅವರಿಗೆ ನೀಡಬೇಕಾದ ಕಮಿಷನ್ ಹಣ ತಾಂತ್ರಿಕ ಕಾರಣಗಳಿಂದ ತಿಂಗಳಾರು ವಿಳಂಬವಾಗುತ್ತಿದೆ. ಇದರಿಂದ ಪಡಿತರ ವಿತರಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಡಿಬಿಟಿ ಮೂಲಕ ಪ್ರತಿ ತಿಂಗಳು ನಿಗದಿತ ಅವಧಿಯಲ್ಲಿ ಕಮಿಷನ್ ಹಣ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಒಂದು ದೇಶ – ಒಂದು ಪಡಿತರ ಚೀಟಿ ಯೋಜನೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಪಡಿತರ ವಿತರಣೆಗೆ ಏಕರೂಪ ತಂತ್ರಜ್ಞಾನ ಒದಗಿಸಿ ಸರ್ವರ್ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಬೇಕು. ಜೊತೆಗೆ ಪಡಿತರ ವಿತರಕರಿಗೆ ಉಚಿತವಾಗಿ ಕಂಪ್ಯೂಟರ್, ಬಯೋಮೆಟ್ರಿಕ್ ಯಂತ್ರ ಹಾಗೂ ಪ್ರಿಂಟರ್ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ತಿಳಿಸಿದರು.
ಇದಲ್ಲದೆ, ಪಡಿತರ ಚೀಟಿದಾರರಿಗೆ ಅಕ್ಕಿ ಮಾತ್ರವಲ್ಲದೆ ಉಪ್ಪು, ಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಬೆಲ್ಲ ಹಾಗೂ ವಿವಿಧ ಬಗೆಯ ಕಾಳುಗಳನ್ನು ವಿತರಿಸಿದರೆ ಅಪೌಷ್ಟಿಕತೆಯನ್ನು ತೊಡೆದು ಹಾಕಲು ಸಹಕಾರಿಯಾಗುತ್ತದೆ. ಭಾರತ್ ರೈಸ್, ಭಾರತ್ ದಾಲ್, ಭಾರತ್ ಗೋಧಿ, ಭಾರತ್ ಆಟ, ಭಾರತ್ ಸಕ್ಕರೆ ಹಾಗೂ ಭಾರತ್ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳನ್ನು ಕಾರ್ಡುದಾರರಿಗೆ ಒದಗಿಸಬೇಕೆಂದು ಈ ಸಮಾರಂಭದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಮೀನಲ್ಲಿ ತಾಯಣ್ಣ ಹೇಳಿದರು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಪರವಾಗಿ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿ ಪಾಲಾಕ್ಷ ರೆಡ್ಡಿ, ಜಗನ್ನಾಥ್ ಗೌಡ, ಮಾರುತಿ, ಬೆಣಕಲ್ ಮಂಜು,ಕುಂಡೆಕರ್ ಪ್ರಕಾಶ್,ಸುಗ್ಲಪ್ಪ,ಹುಸೇನಪ್ಪ ಗಾದಿಲಿಂಗ, ಮೀನಳ್ಳಿ ವೆಂಕಟೇಶ್, ಶರಭಯ್ಯ ಸ್ವಾಮಿ,ಸದಾಶಿವ ಶ್ರೀಕಾಂತ್ ಕುರುಗೋಡು, ವೀರಭದ್ರಯ್ಯ ಸ್ವಾಮಿ, ಬುಜ್ಜಿ ಉದಯ್, ಮಹಮದ್, ಮುಜಾಯಿದ್ ಅಲಿ, ದಾನ ರೆಡ್ಡಿ ಇನ್ನು ಮುಂತಾದ ನೂರಾರು ಮಾಲೀಕರು ಭಾಗವಹಿಸಿದ್ದರು.


