ಗಂಗಾವತಿ30..: ನಗರದ ಸಮೀಪದ ಹನುಮನಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ–2026” ಕಾರ್ಯಕ್ರಮದ ಅಂಗವಾಗಿ ಗಂಗಾವತಿ ನಗರ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗಕ್ಕೆ ಮಾಜಿ ಸಚಿವರು ಹಾಗೂ ಹಾಲಿ ಶಾಸಕ ಗಾಲಿ ಜನಾರ್ದನರೆಡ್ಡಿಯವರು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಸಿದ್ಧಾಂತ, ಅದರ ಬೆಳವಣಿಗೆ ಹಾದಿ ಹಾಗೂ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರದ ಮಹತ್ವವನ್ನು ವಿವರಿಸಿದರು. “ಸಂಘಟನೆಯೇ ಶಕ್ತಿ, ಕಾರ್ಯಕರ್ತರೇ ನಮ್ಮ ಆಸ್ತಿ” ಎಂಬ ಧ್ಯೇಯದೊಂದಿಗೆ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದು ಅಗತ್ಯವಿದೆ ಎಂದು ತಿಳಿಸಿದರು. ಪ್ರತಿಯೊಬ್ಬ ಕಾರ್ಯಕರ್ತನು ಸಂಘಟನೆಯ ಬೆನ್ನೆಲುಬಾಗಿದ್ದು, ಜನಸೇವೆ ಮತ್ತು ಪಕ್ಷದ ತತ್ವಗಳನ್ನು ಜನರ ನಡುವೆ ತಲುಪಿಸುವ ಜವಾಬ್ದಾರಿ ಹೊಂದಿರಬೇಕು ಎಂದು ಕರೆ ನೀಡಿದರು.
ಪ್ರಶಿಕ್ಷಣ ಮಹಾಭಿಯಾನದ ಉದ್ದೇಶ ಕಾರ್ಯಕರ್ತರಲ್ಲಿ ಸಂಘಟನೆಗೆ ಬೇಕಾದ ಸಾಮರ್ಥ್ಯ, ಶಿಸ್ತು ಹಾಗೂ ತತ್ವಜ್ಞಾನವನ್ನು ಬೆಳೆಸುವುದಾಗಿದೆ. ಪಕ್ಷದ ಚಟುವಟಿಕೆಗಳನ್ನು ಗ್ರಾಮ ಮಟ್ಟದಿಂದ ಬಲಪಡಿಸಲು ಇಂತಹ ತರಬೇತಿ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತೆಲಂಗಾಣ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಹಾಗೂ ದಕ್ಷಿಣ ಭಾರತ ಪ್ರಭಾರಿಗಳಾದ ಕಾಸಂ ವೆಂಕಟೇಶ್ವರಲು ಮಾತನಾಡಿ, ದೀನದಯಾಳ್ ಉಪಾಧ್ಯಾಯರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಕಾರ್ಯಕರ್ತರು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಮಾಜಿ ಸಂಸದರಾದ ಶಿವರಾಮೇಗೌಡ್ರು, ಬಳ್ಳಾರಿ ವಿಭಾಗದ ಸಹ ಪ್ರಭಾರಿಗಳಾದ ಚನ್ನಬಸವನಗೌಡ ಪಾಟೀಲ್, ಜಿಲ್ಲಾಧ್ಯಕ್ಷರಾದ ನವೀನ್ ಗುಳಗಣ್ಣನವರ್, ಮಾಜಿ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ್, ಗಿರೇಗೌಡ್ರು, ನಗರ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಹಿರೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಾಳೇಕಾಯಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಮಹಾಲಕ್ಷ್ಮೀ ಕಂದಾರಿ, ಮುಖಂಡರಾದ ಮನೋಹರ ಗೌಡ ಹೇರೂರು, ಯಮನೂರು ಚೌಡ್ಕಿ, ವೀರೇಶ್ ಬಲಕುಂದಿ ಸೇರಿದಂತೆ ವಿವಿಧ ಮೋರ್ಚಗಳ ಅಧ್ಯಕ್ಷರು, ಪದಾಧಿಕಾರಿಗಳು, ಬೂತ್ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


