ಬೆಂಗಳೂರು: “ರಾಜ್ಯ ಸರ್ಕಾರದ ಗುತ್ತಿಗೆ ಮತ್ತು ಟೆಂಡರ್ಗಳಲ್ಲಿ ಮಧ್ಯಸ್ಥಿಕೆ ಕಲಂ (ಆರ್ಬಿಟ್ರೇಷನ್) ರದ್ದುಗೊಳಿಸಲು ನಿರ್ಧರಿಸಲಾಗಿದೆ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಮಧ್ಯಸ್ಥಿಕೆ ಕಲಂನಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿರುವುದಾಗಿ ಕಾನೂನು ಇಲಾಖೆಯ ಗಮನಕ್ಕೆ ಬಂದಿದೆ. ಹಾಗಾಗಿ, ಕಲಂ ಕೈಬಿಡಲು ತೀರ್ಮಾನಿಸಲಾಗಿದೆ. ಆರ್ಬಿಟ್ರೇಷನ್ ರದ್ದು ಮಾಡುವ ಬಗ್ಗೆ ನ.16ರಂದು ಸುತ್ತೋಲೆ ಹೊರಡಿಸಲಾಗಿದೆ” ಎಂದರು.
“ಇಲ್ಲಿಯವರೆಗೂ ಗುತ್ತಿಗೆ ಮತ್ತು ಟೆಂಡರ್ಗಳಲ್ಲಿ ಮಧ್ಯಸ್ಥಿಕೆ ಕಲಂ ಕಡ್ಡಾಯವಾಗಿತ್ತು. ಈ ಕಲಂ ರದ್ದು ರದ್ದುಪಡಿಸುವುದರಿಂದ ಗುತ್ತಿಗೆದಾರರು ಮತ್ತು ಟೆಂಡರ್ ಪಡೆದವರು ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಹಲವು ಪ್ರಕರಣಗಳಲ್ಲಿ ಈ ಕಲಂ ಬಳಸಿಕೊಂಡು ನ್ಯಾಯಾಲಯಗಳ ಮೆಟ್ಟಿಲೇರಿದ ಕಾರಣ ಸರ್ಕಾರ ಆರ್ಥಿಕ ನಷ್ಟ ಅನುಭವಿಸಿತ್ತು” ಎಂದು ಹೇಳಿದರು.