ಬೆಳಗಾವಿ, ಸೆಪ್ಟೆಂಬರ್ 25:ಗೋಕಾಕ ತಾಲೂಕಿನ ಸಾವಳಗಿ–ಗೋಕಾಕದ ಸಿದ್ಧ ಸಂಸ್ಥಾನ ಪೀಠದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವ ಹಾಗೂ ಸಾಹಿತ್ಯ–ಸಂಸ್ಕೃತಿಕ ಸೌರಭ ಕಾರ್ಯಕ್ರಮಗಳಿಗೆ ಸೋಮವಾರ (ಸೆಪ್ಟೆಂಬರ್ 22) ಸಂಜೆ ಭರ್ಜರಿ ಚಾಲನೆ ದೊರಕಿತು. ಶೂನ್ಯ ಸಿಂಹಾಸನಾಧೀಶ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯವರು ಮಹೋತ್ಸವವನ್ನು ಉದ್ಘಾಟಿಸಿ, ಭಕ್ತರಿಗೆ ಆಶೀರ್ವಚನ ನೀಡಿದರು.
ಪೀಠದ ಸುತ್ತಮುತ್ತಲಿನ ಸೇವಕರು, ಗ್ರಾಮಸ್ಥರು, ಗೋಕಾಕ, ಬೈಲಹೊಂಗಲ, ಹುಕ್ಕೇರಿ, ಅಥಣಿ, ಚಿಕ್ಕೋಡಿ, ಬೆಳಗಾವಿ ಮತ್ತು ಪಕ್ಕದ ತಾಲೂಕುಗಳಿಂದ ಆಗಮಿಸಿದ ಭಕ್ತರು ಭಕ್ತಿಭಾವದಿಂದ ಮಹಾಸನ್ನಿಧಿಯವರ ದರ್ಶನ ಪಡೆದು ಪುನೀತರಾದರು.
ಉದ್ಘಾಟನಾ ಸಮಾರಂಭದ ಬಳಿಕ ರಾತ್ರಿ 8.30ಕ್ಕೆ ಶ್ರೀ ದೇವೀ ಮಹಾತ್ಮ ಪುರಾಣ ಪ್ರವಚನ ಆರಂಭವಾಗಿ, ವೀರೇಶ್ವರ ಪುಣ್ಯಾಶ್ರಮ (ಗದಗ)ದ ವೇ.|| ಶ್ರೀ ಶಿವಾನಂದೀಶ್ವರ ಶಾಸ್ತ್ರಿಗಳು ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದರು. ಬಳಿಕ ವಿದ್ವಾನ್ ಶ್ರೀ ಶಿವಕುಮಾರ ಗವಾಯಿ (ಚಿಕ್ಕಹೆಸರೂರು) ಮತ್ತು ಕರ್ನಾಟಕ ಕಲಾಶ್ರೀ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾನಭೂಷಣ ಶ್ರೀ ವೀರೇಶ್ ಕಿತ್ತೂರ (ಗದಗ) ಅವರಿಂದ ಮನೋಹರ ಸಂಗೀತ ನಮನಗಳು ಜರುಗಿದವು. ತಬಲಾ ವಾದನದಲ್ಲಿ ಶ್ರೀ ವಿಜಯ ದೊಡ್ಡಣ್ಣವರ (ಗೋಕಾಕ) ಭಕ್ತರನ್ನು ರಂಜಿಸಿದರು.
ಸೆಪ್ಟೆಂಬರ್ 22 ಮತ್ತು 23ರಂದು ವಿವಿಧ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ತಥಾಸ್ಥಿತಿಯಲ್ಲಿ ನಡೆದವು. ಸೆಪ್ಟೆಂಬರ್ 23ರಂದು ಡಾ. ಬಿರನಗಡ್ಡಿ ರವರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾರಂಭವನ್ನು ಬೆಳಗಾವಿಯ ಶ್ರೀಮತಿ ರೋಹಿಣಿ ಬಂಗಾರಿ ಹಾಗೂ ಅಂಕಲಿಯ ಶ್ರೀಮತಿ ಯಶೋಧಾ ಕೆಂಪಣ್ಣ ನಿರೂಪಿಸಿದರು. ಮುಂದಿನ ಎಂಟು ದಿನಗಳವರೆಗೆ ಪ್ರತಿದಿನ ರಾತ್ರಿ 8.30ರಿಂದ ಪ್ರವಚನ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಅಕ್ಟೋಬರ್ 2ರಂದು ವಿಜಯದಶಮಿಯ ಸೀಮೋಲ್ಲಂಘನ ಮತ್ತು ಬೃಹತ್ ಮಹಾಸಭೆಯೊಂದಿಗೆ ದಸರಾ ಮಹೋತ್ಸವ ಯಶಸ್ವಿಯಾಗಿ ಅಂತ್ಯಗೊಳ್ಳಲಿದೆ.
ಪೀಠವು ಎಲ್ಲಾ ಭಕ್ತರನ್ನು ಕುಟುಂಬ ಸಮೇತ ಆಗಮಿಸಿ, ಜಗದ್ಗುರು ಶ್ರೀ ಶಿವಲಿಂಗೇಶ್ವರ ಮಹಾಸನ್ನಿಧಿ ಹಾಗೂ ಪೂಜ್ಯ ಮರುಳಮ್ಮ ತಾಯಿಯವರ ದರ್ಶನಾಶೀರ್ವಾದ ಪಡೆಯಲು ಆಹ್ವಾನಿಸಿದೆ.

