ಬಳ್ಳಾರಿ; 27..ಬಳ್ಳಾರಿ ತಾಲೂಕಿನ ಜಾಲಿಚೆಂಚಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಂಜೆ 6.30 ಕ್ಕೆ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಸೇವಾ ಟ್ರಸ್ಟ್ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ನಿಂದ ಗ್ರಾಮೀಣ ಸಂಭ್ರಮ ಕಾರ್ಯಕ್ರಮದಲ್ಲಿ ದಶಕಂಠ ರಾವಣ ತೊಗಲುಗೊಂಬೆ ಪ್ರದರ್ಶನ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಾಲಿಚೆಂಚಿ ಗ್ರಾಪಂ ಉಪಾಧ್ಯಕ್ಷೆ ಟಿ. ನಾಗರತ್ನ ಮಲ್ಲಿಕಾರ್ಜುನ ಮಾತನಾಡಿ, ಕಲಾ ಪ್ರಕಾರಗಳನ್ನು ನಡೆಸುವುದೇ ಕಷ್ಟ. ಅದರಲ್ಲಿ ತೊಗಲುಗೊಂಬೆ ಪ್ರದರ್ಶನ ಇನ್ನೂ ಕಷ್ಟ. ರಂಗಭೂಮಿ, ಬಯಲಾಟಗಳ ಪ್ರದರ್ಶನಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿವೆ. ಆದರೆ, ತೊಗಲುಗೊಂಬೆ ಪ್ರದರ್ಶನ ಬಹಳ ವಿರಳ. ಅವುಗಳನ್ನು ಪ್ರದರ್ಶನ ಮಾಡುವವರೇ ಇಲ್ಲ. ಬೆರಳೆಣಿಕೆಯಷ್ಟು ತೊಗಲುಗೊಂಬೆ ಪ್ರದರ್ಶನ ನಡೆಸುವವರು ಇದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ತೊಗಲುಗೊಂಬೆ ಆಟವನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಗ್ರಾಪಂ ಸದಸ್ಯೆ ಟಿ.ಅನಿತಾ ಕುಮಾರರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ಅಧ್ಯಕ್ಷ ವೈ. ಪ್ರಭು, ಕು. ತನುಶ್ರೀ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಸ್ವಾಗತಿಸಿದರು. ಶಿವರಾಜಗೌಡ ಕಾರ್ಯಕ್ರಮ ನಿರೂಪಿಸಿದರು. ಕುಮಾರರೆಡ್ಡಿ ವಂದಿಸಿದರು.


