ಬಳ್ಳಾರಿ, ಮಾ.25: ಭಾರತೀಯ ಜನತಾ ಪಕ್ಷದ ಎಸ್ಟಿ ಮೋರ್ಚಾ ಬಳ್ಳಾರಿ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಎಂ. ದರ್ಶನ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಪಕ್ಷ ಸಂಘಟನೆ ಬಲಪಡಿಸುವ ಉದ್ದೇಶದಿಂದ ಈ ನೇಮಕಾತಿ ಮಾಡಲಾಗಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.
ನೇಮಕಾತಿ ಬಳಿಕ ಮಾತನಾಡಿದ ದರ್ಶನ ಕುಮಾರ್, ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರ ಮಾರ್ಗದರ್ಶನವೇ ತಮ್ಮ ರಾಜಕೀಯ ಜೀವನಕ್ಕೆ ದಿಕ್ಕು ತೋರಿಸಿದೆ ಎಂದು ಹೇಳಿದರು. ಅವರ ನಾಯಕತ್ವ, ಕಾರ್ಯಶೈಲಿ ಹಾಗೂ ಜನಸೇವೆ ತಮಗೆ ಸದಾ ಸ್ಪೂರ್ತಿಯಾಗಿದ್ದು, ಅವರ ಆದರ್ಶಗಳನ್ನು ಅನುಸರಿಸಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಗಾಲಿ ಸೋಮಶೇಖರ ರೆಡ್ಡಿ ಅವರ ಬೆಂಬಲ ಮತ್ತು ಆಶೀರ್ವಾದದಿಂದಲೇ ಈ ಜವಾಬ್ದಾರಿ ದೊರೆತಿದ್ದು, ಪಕ್ಷದ ವಿಶ್ವಾಸವನ್ನು ಉಳಿಸಿಕೊಳ್ಳಲು ನಿಷ್ಠೆಯಿಂದ ಕೆಲಸ ಮಾಡುವುದಾಗಿ ದರ್ಶನ ಕುಮಾರ್ ಹೇಳಿದರು. ಎಸ್ಟಿ ಸಮುದಾಯದ ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದರು.
ಪಕ್ಷದ ತತ್ವ ಸಿದ್ಧಾಂತಗಳನ್ನು ಜನಸಾಮಾನ್ಯರ ಮಟ್ಟಕ್ಕೆ ತಲುಪಿಸಿ, ಯುವಕರನ್ನು ಸಂಘಟನೆಯಲ್ಲಿ ಸೇರ್ಪಡೆಗೊಳಿಸುವ ಮೂಲಕ ಬಿಜೆಪಿ ಬಲವರ್ಧನೆಗೆ ಶ್ರಮಿಸುವುದಾಗಿ ದರ್ಶನ ಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಜಿ. ವೆಂಕಟರಮಣ, ಕೃಷ್ಣ ಕಿಟ್ಟು ಸೇರಿದಂತೆ ಹಲವು ಪಕ್ಷದ ಮುಖಂಡರು ಅಭಿನಂದನೆ ಸಲ್ಲಿಸಿ, ಸಂಘಟನೆ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷವನ್ನು ಇನ್ನಷ್ಟು ಬಲಪಡಿಸುವಂತೆ ಶುಭಾಶಯ ಕೋರಿದರು.


