ಬೆಳಗಾವಿ, ನವೆಂಬರ್ 1: ಕನ್ನಡ ರಾಜ್ಯೋತ್ಸವದ ದಿನದಂದೇ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ಅನುಮತಿ ಇಲ್ಲದಿದ್ದರೂ ಕರಾಳ ದಿನಾಚರಣೆ ಆಚರಿಸಿ ಪುಂಡಾಟ ನಡೆಸಿದ್ದಾರೆ. ಈ ವೇಳೆ “ಬೆಳಗಾವಿ ನಮ್ಮ ಹಕ್ಕು, ಯಾರಪ್ಪನ ಆಸ್ತಿಯಲ್ಲ. ಯಾರು ಕೊಡಲ್ಲ ಅಂತಾರೆ? ತೆಗೆದುಕೊಳ್ಳದೆ ಬಿಡುವುದಿಲ್ಲ” ಎಂದು ಘೋಷಣೆಗಳನ್ನು ಕೂಗಿದ್ದಾರೆ. ಎಂಇಎಸ್ ಕಾರ್ಯಕರ್ತರು “ಕನ್ನಡ ಸರ್ಕಾರಕ್ಕೆ ಧಿಕ್ಕಾರ. ಕೇಂದ್ರ ಸರ್ಕಾರಕ್ಕೆ ಧಿಕ್ಕಾರ” ಎಂದು ಘೋಷಣೆಗಳನ್ನು ಕೂಗುವ ಮೂಲಕ ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸೇರಿದಂತೆ ಹಲವು ಪ್ರದೇಶಗಳನ್ನು ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿದ್ದಾರೆ.


