ಬಳ್ಳಾರಿ ಜೂನ್ 18..: ಮೊರಾರ್ಜಿ ದೇಸಾಯಿ, ಗಾಂಧಿ ತತ್ವ, ನವೋದಯ ಸೇರಿದಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ವಸತಿ ಶಾಲೆಗಳಿಗೆ ಪ್ರವೇಶವನ್ನು ಬಯಸಿ ನೂರಾರು ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು, ಅಷ್ಟೇ ಅಲ್ಲದೆ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ವರ್ಗಾವಣೆಯನ್ನು ಬಯಸಿ ಹಲವಾರು ಅರ್ಜಿಗಳನ್ನು ಆಯಾ ಮುಖ್ಯ ಉಪಾಧ್ಯಾಯರಲ್ಲಿ ಸಲ್ಲಿಸಿಕೊಂಡಿದ್ದು ಅವುಗಳನ್ನು ಇಂದು ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸುವ ಮೂಲಕ ಇತ್ಯರ್ಥಪಡಿಸಲಾಯಿತು.
ಆದರೆ ಈ ವಿದ್ಯಾರ್ಥಿಗಳ ಅರ್ಜಿಗಳನ್ನು ಇಂದು ಇತ್ಯರ್ಥಪಡಿಸದೆ ಮತ್ತೆ ಮುಂದಿನ ವಾರಕ್ಕೆ ಸಭೆಯನ್ನು ಮುಂದೂಡಿರುವುದಾಗಿ ಸಾಯಕ ಆಯುಕ್ತರು ಸಭೆಯನ್ನು ಮುಕ್ತಾಯಗೊಳಿಸಿದರು. ಇದರಿಂದ ಸಹಾಯಕ ಆಯುಕ್ತರ ಕಚೇರಿಗೆ ಬಂದಿದ್ದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಗೊಂದಲದಿಂದ ಮರಳಿದರು.
ಹೀಗೆ ಪದೇ ಪದೇ ಹಲವಾರು ಸಲ ಕಚೇರಿಗೆ ಅಲೆದಾಡಿಸುತ್ತಿರುವ ಪ್ರಾಂಶುಪಾಲರು ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಪೋಷಕರು ತರಾಟೆಗೆ ತೆಗೆದುಕೊಂಡರು. ದಲಿತ ಮುಖಂಡರು ಮತ್ತು ಹಿರಿಯ ಪತ್ರಕರ್ತರಾದ ಚಳ್ಳಗುರ್ಕಿ ಸೋಮಶೇಖರ್ ಅವರು ಹೀಗೆ ಪದೇ ಪದೇ ವಿದ್ಯಾರ್ಥಿಗಳನ್ನು ಮತ್ತು ಪೋಷಕರ ಕಚೇರಿಗೆ ಅಲೆದಾಟ ತಪ್ಪಿಸುವಂತೆ ವಸತಿ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಕೂಡಲೇ ಪ್ರವೇಶ ಮತ್ತು ವರ್ಗಾವಣೆಯ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.