ಹೊಸಪೇಟೆ (ವಿಜಯನಗರ): ದಾವಣಗೆರೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಹೊಸಪೇಟೆಯ ವಿಕಾಸ ಬ್ಯಾಂಕ್ ನಲ್ಲಿ ವಿಲೀನವಾಗಲು ಬ್ಯಾಂಕಿನ 33ನೇ ಮಹಾಜನಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೆ.ಎಸ್.ಮಹೇಶ್ವರಪ್ಪ ತಿಳಿಸಿದ್ದಾರೆ ಎಂದು ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ತಿಳಿಸಿದರು.
ಶ್ರೀ ಸದ್ಯೋಜಾತ ಶಿವಾಚಾರ್ಯ ನಿಕೇತನ ಹಿರೇಮಠ, ಎಂ.ಸಿ.ಸಿ. ಬಿ-ಬ್ಲಾಕ್, ದಾವಣಗೆರೆಯಲ್ಲಿ ಭಾನುವಾರ ಜರುಗಿದ 33 ನೇ ವಾರ್ಷಿಕ ಮಹಾಸಭೆಯ ನಂತರ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ ಎಂದು ಹೇಳಿಕೆ ನೀಡಿದ ಅವರು ಕಳೆದ 30 ವರ್ಷಗಳಿಂದ ಹೊಸಪೇಟೆಯಲ್ಲಿ ಕಾರ್ಯನಿರ್ವಹಿಸುವ ವಿಕಾಸ ಬ್ಯಾಂಕ್ ಸದ್ಯ 18 ಶಾಖೆಗಳನ್ನು ಹೊಂದಿ ರಾಜ್ಯವ್ಯಾಪಿ ಕಾರ್ಯನಿರ್ವಹಿಸುತ್ತಿದ್ದು ಒಂದು ವರ್ಷದ ಹಿಂದೆ ದಾವಣಗೆರೆ ಶಾಖೆಯನ್ನು ಆರಂಭಿಸುವ ಮೂಲಕ ಆರ್ಥಿಕವಾಗಿ ಸದೃಡವಾಗಿರುವ ಹಾಗೂ ನಮ್ಮ ಬ್ಯಾಂಕ್ ಕಳೆದ 33 ವರ್ಷಗಳಿಂದ ಗ್ರಾಹಕರ ಪ್ರೀತಿ-ವಿಶ್ವಾಸಗಳಿಂದ ಕಾರ್ಯನಿರ್ವಹಿಸುತ್ತಿದ್ದು ಭಾರತೀಯ ರಿಜರ್ವ್ ಬ್ಯಾಂಕ್ ನಿಯಮಾವಳಿಯಂತೆ ಮತ್ತಷ್ಟು ಶಿಸ್ತು ಬದ್ಧವಾಗಿ ಹಾಗೂ ನಮ್ಮ ಬ್ಯಾಂಕ್ ಸದಸ್ಯರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ನಮ್ಮ ಆಡಳಿತ ಮಂಡಳಿಯ ವಿಲೀನ ಪ್ರಸ್ತಾವನೆಯನ್ನು ಸರ್ವ ಸದಸ್ಯರ ಮಹಾಜನ ಸಭೆ ಒಪ್ಪಿಕೊಂಡು ಸರ್ವಾನುಮತದ ಅನುಮೋದನೆ ನೀಡಿದೆ ಎಂದರು.
ಪ್ರಸ್ತಾವನೆಯ ಜೊತೆ ಮಹಾಸಭೆಯು ಸದಸ್ಯರಿಗೆ ಸದ್ಯದ ಆರ್ಥಿಕ ವರ್ಷದಲ್ಲಿ ಶೇ.5% ರಷ್ಟು ಡಿವಿಡೆಂಡ್ ನೀಡಲು ಆಡಳಿತ ಮಂಡಳಿಯವರು ಇಟ್ಟಿರುವ ಪ್ರಸ್ತಾವನೆಯನ್ನು ಸಭೆಯು ಪರಿಶೀಲಿಸಿ ತನ್ನ ಒಪ್ಪಿಗೆಯನ್ನು ನೀಡಿದೆ ಎಂದು ತಿಳಿಸಿದರು.