ಧಾರವಾಡ,ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಭಿವೃದ್ಧಿ ಯೋಜನೆ ಹುಬ್ಬಳ್ಳಿ–ಧಾರವಾಡ (ಶಹರ) ಇವರ ಸಂಯುಕ್ತಾಶ್ರಯದಲ್ಲಿ “ಬಾಲವಿಕಾಸ ನಡಿಗೆ ಪಾಲಕರ ಕಡೆಗೆ” ಎಂಬ ಒಂದು ದಿನದ ತರಬೇತಿ ಕಾರ್ಯಕ್ರಮವು ಧಾರವಾಡದ ರಂಗಾಯಣದಲ್ಲಿರುವ ಸುವರ್ಣಾ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಅಡಿವೇಶ ಗಿರೆಪ್ಪ ಇಟಗಿ ಉದ್ಘಾಟಿಸಿದರು. ಅಧ್ಯಕ್ಷೀಯ ಸ್ಥಾನವನ್ನು ಜಂಟಿ ನಿರ್ದೇಶಕರಾದ ಶ್ರೀಮತಿ ಅಕ್ಕಮಹಾದೇವಿ ಕೆ.ಹೆಚ್ ವಹಿಸಿದ್ದರು.
ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಶ್ರೀ ಅಡಿವೇಶ ಇಟಗಿ ಅವರು, “ಮಕ್ಕಳು ಉದ್ಯಾನವನದ ಮೊಗ್ಗುಗಳಂತೆ. ಅವರನ್ನು ಪ್ರೀತಿ, ಕಾಳಜಿ ಮತ್ತು ಸಂಸ್ಕಾರದೊಂದಿಗೆ ಪೋಷಿಸಿದರೆ ಉತ್ತಮ ವ್ಯಕ್ತಿತ್ವ ಬೆಳೆಸಬಹುದು” ಎಂದು ಸಂಸ್ಕೃತ ಶ್ಲೋಕಗಳು ಹಾಗೂ ಉದಾಹರಣೆಗಳ ಮೂಲಕ ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಮತಿ ಅಕ್ಕಮಹಾದೇವಿ ಅವರು, ಈ ಕಾರ್ಯಕ್ರಮವನ್ನು ರಾಜ್ಯದ ಆರು ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದು, ಇದರ ಗುರಿ ಹಾಗೂ ಉದ್ದೇಶಗಳನ್ನು ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಡಾ. ಹೆಚ್.ಹೆಚ್ ಕುಕನೂರ ಅವರು ಮಾತನಾಡಿ, ಪೋಕ್ಷೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ “ಅಕ್ಕಪಡೆ” ಕಾರ್ಯನಿರ್ವಹಿಸುತ್ತಿರುವ ಕುರಿತು ಮಾಹಿತಿ ನೀಡಿದರು. ಸಂಕಷ್ಟದಲ್ಲಿರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಎಸ್.ಎಸ್ ಕೆಳದಿಮಠ ಅವರು ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳ ಪೋಷಣೆಯಲ್ಲಿ ಪಾಲಕರ ಜವಾಬ್ದಾರಿಗಳ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಡಾ. ಕಮಲವ್ವ ಬೈಲೂರ, ಶ್ರೀ ರಾಮಕೃಷ್ಣ ಸದಲಗಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸುರೇಶ ಕುಲಕರ್ಣಿ, ಡಾ. ಸ್ವಪ್ನಾ ಪಾಂಡುರಂಗಿ, ಶ್ರೀ ಭರತಕುಮಾರ ಚಂದನಕರ ಮತ್ತು ಶ್ರೀ ನಂದಪ್ಪಗೌರ ದ್ಯಾಪೂರ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಸುನೀತಾ ಪಾಟೀಲ (ಹುಬ್ಬಳ್ಳಿ–ಧಾರವಾಡ ಶಹರ) ಹಾಗೂ ಶ್ರೀ ಮಂಜುನಾಥ ಕುಂಬಾರ (ಧಾರವಾಡ ಗ್ರಾಮೀಣ) ಉಪಸ್ಥಿತರಿದ್ದರು.
“ಬಾಲವಿಕಾಸ ನಡಿಗೆ ಪಾಲಕರ ಕಡೆಗೆ”.ಅಕಾಡೆಮಿಯಿಂದ ತರಬೇತಿ ಕಾರ್ಯಕ್ರಮ.


