ಹಸಿರು ಕ್ರಾಂತಿ ವರದಿ, ಜಮಖಂಡಿ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರು ತೋರಿದಂತಹ ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಯರಿಗೂ ಆದರ್ಶವಾದದ್ದು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ಇಲ್ಲಿನ ತಾಲ್ಲೂಕು ಆಡಳಿತ ಸೌಧದ ಸಬಾಭವಣದಲ್ಲಿ ತಾಲ್ಲೂಕಾಡಳಿತ ಹಾಗೂ ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ನಡೆದ ರಾಣಿ ಚನ್ನಮ್ಮ ಜಯಂತಿ ನಿಮಿತ್ತ ಚನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಧೀರ ದಿಟ್ಟ ಮಹಿಳೆ ಚನ್ನಮ್ಮ. ದೇಶದ ಜನ ತಾವಿರುವ ಪ್ರದೇಶದಲ್ಲಿ ಗೌರವದಿಂದ ಬದುಕ ಬೇಕಾದರೇ ಸ್ವಾತಂತ್ರ್ಯ ಬಹಳ ಮುಖ್ಯ ಎಂದು ಅವರು ಚೆನ್ನಾಗಿ ತಿಳಿದಿದ್ದರು ಎಂದರು.
ಪಂಚಮಸಾಲಿ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲೀಕರ ಮಾತನಾಡಿ ಚನ್ನಮ್ಮ ಅವರು ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ. ಹಾಗಾಗಿ ಅವರ ಜನ್ಮ ದಿನವನ್ನು ಕಿತ್ತೂರಿನ ವಿಜಯೋತ್ಸವ ದಿನ ಎಂದು ಆಚರಿಸಲಾಗುತ್ತಿದೆ ಎಂದರು.
ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಸಕಲ ವಾಧ್ಯ ಮೇಳಗಳೊಂದಿಗೆ ತಾಲ್ಲೂಕು ಆಡಳಿತ ಸೌಧದವರೆಗೆ ತೆರೆದ ವಾಹನದಲ್ಲಿ ಚನ್ನಮ್ಮ ಭಾವಚಿತ್ರ ಮೆರವಣಿಗೆ ಮಾಡಿದರು.
ಸಾನಿಧ್ಯವನ್ನು ಕಿತ್ತೂರ ಮಡಿವಾಳೇಶ್ವರ ಮಠದ ಶ್ರೀಗಳು, ಓಲೇಮಠದ ಆನಂದ ದೇವರು ವಹಿಸಿದ್ದರು, ತಹಶೀಲ್ದಾರ ಅನೀಲ ಬಡಿಗೇರ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಏಗಪ್ಪ ಸವದಿ, ಮಾಜಿ ಭೂಸೇನಾ ನಿಗಮ ಅಧ್ಯಕ್ಷ ಶ್ರೀಶೈಲ ದಳವಾಯಿ, ದೇವಲ ದೇಸಾಯಿ, ತಾಲ್ಲೂಕು ಅಧ್ಯಕ್ಷ ಮಹದೇವಪ್ಪ ಇಟ್ಟಿ, ಪಿ.ಎನ್.ಪಾಟೀಲ್, ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ಜಿ.ಬಿ.ಕೌಜಲಗಿ, ಗುರುಪಾದ ಚಿನ್ನಾಮಲ್ಲ, ಪ್ರಭು ಜನವಾಡ, ಜಿ.ಬಿ.ಪಾಟೀಲ ಸೇರಿದಂತೆ ಇತರರು ಇದ್ದರು.


