ಧಾರವಾಡ : ಕಳೆದ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸಾಧನೆಯಲ್ಲಿ ಕಳಪೆ ಸಾಧನೆ ಮಾಡಿದ 106 ಶಾಲೆಗಳಿಗೆ ತಕ್ಷಣ ಶೋಕಾಸ್ ನೋಟಿಸ್ ನೀಡಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಆದೇಶಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.50 ಕ್ಕಿಂತ ಕಡಿಮೆ ಫಲಿತಾಂಶ ಮಾಡಿರುವ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಜರುಗಿಸಿ, ಮಾತನಾಡಿದರು.
ಶಿಕ್ಷಕ ವೃತ್ತಿ ಉಳಿದ ವೃತ್ತಿಗಳಿಗಿಂತ ಶ್ರೇಷ್ಠವಾಗಿದೆ. ಎಲ್ಲ ಸೌಲಭ್ಯಗಳಿದ್ದರೂ ಜಿಲ್ಲೆಯ ಆರು ಶಾಲೆಗಳು ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಮಾಡಿವೆ. ಇವುಗಳಲ್ಲಿ ಎರಡು ಅನುದಾನಿತ ಹಾಗೂ ನಾಲ್ಕು ಅನುದಾನರಹಿತ ಪ್ರೌಢಶಾಲೆಗಳು ಸೇರಿವೆ. ಶಾಲೆಯ ಒಂದು ಮಗುವನ್ನು ಪಾಸ್ ಮಾಡಿಸುವಷ್ಟು ಕಲಿಸದ ಶಿಕ್ಷಕರಿಗೆ, ಆ ಶಾಲೆಯ ಮುಖ್ಯಸ್ಥರಿಗೆ ನಾಚಿಕೆ ಆಗಬೇಕು. ನಿಮ್ಮ ಶಿಕ್ಷಕ ವೃತ್ತಿ ನಿಮಗೆ ಆತ್ಮತೃಪ್ತಿ ನೀಡಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಅವರು ತಿಳಿಸಿದರು.
ಶೂನ್ಯ ಸಾಧನೆ ಮಾಡಿದ ಶಾಲೆಗಳ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲು ಮತ್ತು ಅಲ್ಲಿನ ಮಕ್ಕಳನ್ನು ಹತ್ತಿರದ ಬೇರೆ ಶಾಲೆಗಳಿಗೆ ವರ್ಗಾಯಿಸಲು ಕ್ರಮವಹಿಸಬೇಕು. ಈ ಕುರಿತು ನಿಷ್ಕಾಳಜಿ ತೋರಿದಲ್ಲಿ ಡಿಡಿಪಿಐ ಮತ್ತು ಸಂಬಂದಿಸಿದ ಬಿಇಓ ಅವರ ವಿರುದ್ದ ಕ್ರಮಕ್ಕಾಗಿ ಇಲಾಖೆಗೆ ಶಿಪಾರಸ್ಸು ಮಾಡಲಾಗುತ್ತದೆ ಎಂದು ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಎಚ್ಚರಿಸಿದರು.
ಇಂದಿನ ಪರಿಶೀಲನಾ ಸಭೆಗೆ ಗೈರಾಗಿರುವ ಶೂನ್ಯ ಸಾಧನೆ ಮಾಡಿರುವ ಶಾಲೆಗಳ ಅನುಮತಿಯನ್ನು ರದ್ದುಪಡಿಸಲು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಿಇಓ ಭುವನೇಶ ಪಾಟೀಲ ಅವರು ನಿರ್ದೇಶನ ನೀಡಿದರು.
ಶಾಲೆಗಳಿಗೆ ಅನಧಿಕೃತವಾಗಿ ಗೈರಾಗುವ, ನಿಗಧಿತ ಸಮಯಕ್ಕೆ ಶಾಲೆಗೆ ಹೋಗದ ಮತ್ತು ಕಲಿಕೆಯಲ್ಲಿ ಪ್ರಗತಿ ಸಾಧಿಸದ ಶಿಕ್ಷಕರನ್ನು ಗುರುತಿಸಿ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಶೈಕ್ಷಣಿಕ ಸುಧಾರಣೆಗಾಗಿ ಮಿಷನ್ ಮೋಡ್ ದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಕೆಲಸ ಮಾಡಿದರೂ, ಸರಿಯಾದ ಸಾಧನೆ ಮಾಡಲಿಲ್ಲ. ಈ ಕಳಪೆ ಗುಣಮಟ್ಟದ ಸಾಧನೆಗೆ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಹೊಣೆ ಹೊರಬೇಕು. ಕೈತುಂಬ ಸಂಬಳ, ಸೌಲಭ್ಯಗಳನ್ನು ನೀಡಿದ್ದರೂ ತಪ್ಪು ಒಪ್ಪಿಕೊಳ್ಳದೇ ಸಣ್ಣ ಪುಟ್ಟ ಕಾರಣ ನೀಡಿ, ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವದರಿಂದ ಯಾವ ಪ್ರಯೋಜನವಿಲ್ಲ ಎಂದು ಅವರು ಖಾರವಾಗಿ ನುಡಿದರು.
ಪ್ರತಿ ಶಿಕ್ಷಕನ ಕರ್ತವ್ಯಗಳ ಮೌಲ್ಯಮಾಪನ ಮಾಡುವ ಮತ್ತು ಗ್ರೇಡಿಂಗ್ ಮಾಡುವ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ಇದೆ. ಶಾಲಾ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆ ಹಾಗೂ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನೀಡುವ ಕಾರ್ಯಗಳನ್ನು ಸಮರ್ಪಕವಾಗಿ ಮಾಡದೇ, ನಿಷ್ಕಾಳಜಿ, ಕರ್ತವ್ಯಲೋಪ ಮಾಡುವ ಅಧಿಕಾರಿ ಮತ್ತು ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ವಿಶೇಷವಾಗಿ ಸತತವಾಗಿ ಕಡಿಮೆ ಫಲಿತಾಂಶ ಮಾಡುತ್ತಿರುವ ಶಾಲೆಗಳಿಗೆ ಅಧಿಕಾರಿಗಳಿಂದ ಅನಿರೀಕ್ಷತ ಭೇಟಿ, ಪರಿಶೀಲನೆಗೆ ಆದೇಶಿಸಿ, ವರದಿ ಪಡೆಯಲಾಗುತ್ತದೆ ಎಂದು ಭುವನೇಶ ಪಾಟೀಲ ಅವರು ತಿಳಿಸಿದರು.
ಮುಂದಿನ ವರ್ಷದ ಫಲಿತಾಂಶ ಸುಧಾರಣೆ ಬಗ್ಗೆ ಕ್ರಿಯಾಯೋಜನೆ ರೂಪಿಸಿ ಡಿಡಿಪಿಐ ಕಚೇರಿ ಸಲ್ಲಿಸಬೇಕೆಂದು ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ಡಾ.ರೇಣುಕಾ ಅಮಲಝರಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಜಿಲ್ಲಾ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಯಟ್ ಉಪನ್ಯಾಸಕ ಎ.ಎ.ಖಾಜಿ ಸ್ವಾಗತಿಸಿದರು. ಡಯಟ್ ಹಿರಿಯ ಉಪನ್ಯಾಸಕ ಅರ್ಜುನ ಕಾಂಬೋಗಿ ಫಲಿತಾಂಶ ವಿಶ್ಲೇಷಣೆ ಮಾಡಿದರು.
ಡಯಟ್ ಉಪ ಪ್ರಾಚಾರ್ಯ ಜೆ.ಜಿ.ಸೈಯದ್, ಡಿವೈಪಿಸಿ ಎಸ್.ಎಂ.ಹುಡೇದಮನಿ, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ, ರಾಮಕೃಷ್ಣ ಸದಲಗಿ, ಶಿವಾನಂದ ಮಲ್ಲಾಡ, ಚನ್ನಪ್ಪಗೌಡರ, ಮಹಾದೇವಿ ಮಾಡಲಗೇರಿ, ಉಮಾದೇವಿ ಬಸಾಪುರ ಸೇರಿದಂತೆ ಡಯಟ್ ಉಪನ್ಯಾಸಕರು, ಡಿಡಿಪಿಐ ಕಚೇರಿಯ ಅಧಿಕಾರಿಗಳು, ಶೇ.50 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಪ್ರೌಢಶಾಲೆಗಳ ಮುಖ್ಯೋಪಾಧ್ಯಾರು ಸಭೆಯಲ್ಲಿ ಭಾಗವಹಿಸಿದ್ದರು.