ಚಿಕ್ಕಬಳ್ಳಾಪುರ: ಜೂನ್ 19ರಂದು ದಿಢೀರ್ ರದ್ದಾಗಿದ್ದ ತಾಲೂಕಿನ ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಜುಲೈ.2ರಂದು ನಡೆಸಲು ನಿರ್ಧರಿಸಲಾಗಿದೆ.
ಜೂನ್ 18ರಂದು ಬೆಳಗ್ಗೆ 11 ಗಂಟೆಗೆ ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ರದ್ದು ಮಾಡಲಾಗಿತ್ತು. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯ ಕೆಲವು ಇಲಾಖೆಗಳಿಂದ ಪ್ರಸ್ತಾವನೆಗಳು ತಲುಪಿರದ ಹಾಗೂ ಇದಕ್ಕೆ ಬೇಕಾದ ಮಂಜೂರಾತಿಯೂ ಸಿಗದ ಕಾರಣ ಸಂಪುಟ ಸಭೆಯನ್ನು ರದ್ದುಗೊಳಿಸಿರುವುದಾಗಿ ಸರ್ಕಾರ ತಿಳಿಸಿತ್ತು.
ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸಗಳು ಆಗಬೇಕು ಎಂಬ ಉದ್ದೇಶದಿಂದ ಮತ್ತು ಕೆಲವು ಸಚಿವರು ಹಾಗೂ ಶಾಸಕರು ವಿಶೇಷ ಮನವಿಗಳನ್ನು ಮಾಡಿದ್ದರು.
ಹೀಗಾಗಿ ಈ ವ್ಯಾಪ್ತಿಯ ವಿಷಯಗಳನ್ನು ಬಿಟ್ಟು ಗುರುವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಲಾಗಿತ್ತು. ಶಾಸಕರು ಸಲ್ಲಿಸಿರುವ ಪ್ರಸ್ತಾವನೆಗಳಿಗೆಲ್ಲ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ಜುಲೈ.2ರಂದು ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಜು.2ರಂದು ಮಧ್ಯಾಹ್ನ 12 ಗಂಟೆಗೆ ನಂದಿ ಗಿರಿಧಾಮದಲ್ಲಿರುವ ಮಯೂರ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಜಿಲ್ಲೆಯ ಜನರ ಚಿತ್ತ ಇದೀಗ ಸಚಿವ ಸಂಪುಟದತ್ತ ಹರಿದಿದೆ.