ಬೆಣ್ಣೆ ಹಳ್ಳ, ತುಪರಿ ಹಳ್ಳ,ಪ್ರವಾಹ ಶಾಶ್ವತ ಪರಿಹಾರಕ್ಕೆ ಕ್ರಮ ಸಚಿವ ಸಂತೋಷ ಲಾಡ್

Pratibha Boi
ಬೆಣ್ಣೆ ಹಳ್ಳ, ತುಪರಿ ಹಳ್ಳ,ಪ್ರವಾಹ ಶಾಶ್ವತ ಪರಿಹಾರಕ್ಕೆ ಕ್ರಮ ಸಚಿವ ಸಂತೋಷ ಲಾಡ್
WhatsApp Group Join Now
Telegram Group Join Now

ಧಾರವಾಡ ,ಜೂ,೧೪: ಹುಬ್ಬಳ್ಳಿ ಮತ್ತು ನವಲಗುಂದ ಸೇರಿದಂತೆ ತಾಲೂಕಿನ ಕರ್ಲವಾಡ, ಆರೇಕುರಟ್ಟಿ, ಯಮನೂರ ಗ್ರಾಮಗಳ ಹತ್ತಿರ ಬೆಣ್ಣಿಹಳ್ಳದ ಪ್ರವಾಹದಿಂದ ಅಪಾರ ಪ್ರಮಾಣದ ನೀರು ಬಂದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದ ಮತ್ತು ಹಾನಿಯಾದ ಪ್ರದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಹಾಗೂ ಶಾಸಕ ಎನ್. ಎಚ್. ಕೋನರಡ್ಡಿ ಅವರು ವೀಕ್ಷಣೆ ಮಾಡಿದರು.
ರಸ್ತೆ, ಬ್ರಿಜ್ ಹಾಗೂ ಇತರ ಸಾರ್ವಜನಿಕ ಮೂಲ ಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ತ್ವರೀತವಾಗಿ ದುರಸ್ತಿ, ಮರು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರೈತರು ಈಗಾಗಲೇ ಹೆಸರು ಬೆಳೆ ಹಾಗೂ ಇತರೆ ಮುಂಗಾರು ಬೆಳೆ ಬಿತ್ತಿದ್ದಾರೆ. ಹೆಸರು ಬೆಳೆ ಮೊಳಕೆ ಒಡೆಯುವ ಹಂತಕ್ಕೆ ಬಂದಿದ್ದು, ಧಾರಾಕಾರ ಮಳೆಯಿಂದ ರೈತರಿಗೆ ಆರ್ಥಿಕವಾಗಿ ನಷ್ಟವಾಗಿದೆ. ರೈತರ ಜಮೀನುಗಳಲ್ಲಿನ ಬದುವುಗಳು ಕೊಚ್ಚಿ ಹೋಗಿ ಹಾನಿಯಾಗಿದೆ. ಕ್ಷೇತ್ರದಲ್ಲಿ ಬೆಳೆ ಹಾನಿ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಮಾಹಿತಿ ಮತ್ತು ವರದಿ ಮೇಲೆ ಸರ್ಕಾರದ ಜೊತೆ ಚರ್ಚಿಸಿ, ಎಸ್.ಡಿ.ಆರ್.ಎಫ್ ನಿಯಾಮವಳಿಗಳನ್ನು ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುವುದು ಎಂದು ಸಚಿವ ಸಂತೋಷ ಲಾಡ ಅವರು ತಿಳಿಸಿದರು.
ನವಲಗುಂದ ಭಾಗದಲ್ಲಿ ೭-೮ ಜಾಗಗಳಲ್ಲಿ ಪ್ರವಾಹ ನೋಡಿದ್ದೇನೆ. ನಾಲಾ ಹಾಗೂ ಹಳ್ಳ ಅಗಲೀಕರಣ್ಣಕ್ಕೆ ೧೬೦೦ ಕೋಟಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದೆ. ಅದರಲ್ಲಿ ೨೦೦ಕೋಟಿ ೧೪೦ ಕಿ.ಮಿ ಹಳ್ಳ ಅಗಲೀಕರಣ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ನವಲಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಅನೇಕ ಹಳ್ಳಿಗಳನ್ನು ಪ್ರವಾಸ ಮಾಡಿದ್ದೇವೆ. ಬಹಳ ವರ್ಷಗಳಿಂದ ನವಲಗುಂದ, ಕುಂದಗೋಳ ಭಾಗಗಳಲ್ಲಿ ಈ ರೀತಿ ಪ್ರವಾಹ ಪರಿಸ್ಥಿತಿಯಿಂದ ತೊಂದರೆ ಆಗುತ್ತಿದೆ.
ಇದಕ್ಕೆ ಸಂಪೂರ್ಣ ಪರಿಹಾರ ಕಂಡು ಹಿಡಿಯಬೇಕು ಎಂದು ಮಾನ್ಯ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಇರುವಂತ ಕಾಮಗಾರಿ ಯೋಜನೆ ಬಂಡು (ಬದು) ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ೧೬೦ ಕೋಟಿಯ ಕಾಮಗಾರಿಗೆ ಡಿಪಿಆರ್ ಮಾಡಲಾಗಿದ್ದು, ಅದುಒಂದು ಹಂತಕ್ಕೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಅವರು ಹೇಳಿದರು.
ಮುಂದಿನ ವರ್ಷ ೨೦೨೬ ರ ಜನವರಿಯಲ್ಲಿ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಎರಡು ಕಾಮಗಾರಿಗಳು ಪ್ರಾರಂಭವಾದರೆ ಬಹುತೇಕ ಮುಂದೆ ಬರುವ ಮಳೆಗಾಲದಲ್ಲಿ ನವಲಗುಂದಕ್ಕೆ ಮಳೆಯಿಂದಾಗಿ ಪ್ರವಾಹ ಬರುವ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು.
ಹಳ್ಳಗಳ ಭಾಗಗಳಲ್ಲಿರುವ ಹೊಲಗಳಿಗೆ ರೈತರು ಬಿತ್ತನೆಯನ್ನು ಮಾಡಿದ್ದಾರೆ. ಕೆಲವು ಹೊಲಗಳಿಗೆ ನೀರು ನುಗ್ಗಿದೆ. ಅದರಿಂದ ರೈತರಿಗೆ ತೊಂದರೆಯಾಗಿದೆ ಅದನ್ನು ಪರಿಗಣಿಸಿ ಮುಂದೆ ಮತ್ತೆ ಬಿತ್ತನೆ ಮಾಡುವ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ. ಅದರಂತೆ ಮುಂದೆ ಫಸಲು ಬರದೆ ಹೋದಲ್ಲಿ, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಲಾಗುತ್ತದೆ ಎಂದು ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ ಎಸ್ ಲಾಡ ಅವರು ತಿಳಿಸಿದರು.
ಶಾಸಕ ಎನ್. ಎಚ್. ಕೋನರಡ್ಡಿ ಅವರು ಮಾತನಾಡಿ, ನವಲಗುಂದ ಕ್ಷೇತ್ರದಲ್ಲಿ ೩ ತಾಲೂಕಿನ ಹಳ್ಳಗಳು ಬರುತ್ತವೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದ್ದು,
ಬೆಣ್ಣೆ ಹಳ್ಳ, ತುಪ್ಪರಿಹಳ್ಳಕ್ಕೆ ಅನೇಕ ಬೇರೆ ಬೇರೆ ೫೬ ಹಳ್ಳಗಳ ನೀರು ಸೇರಿದೆ ಹೀಗಾಗಿ ಪ್ರವಾಹ ಸೃಷ್ಟಿಯಾಗಿದೆ ನನ್ನ ಕ್ಷೇತ್ರ ಕೆಳ ಹಂತದಲ್ಲಿದೆ ಹೀಗಾಗಿ ನೀರು ಹೊಕ್ಕು ಸಮಸ್ಯೆಯಾಗಿದೆ ಕ್ಷೇತ್ರದ ರೈತರಿಗೆ ತುಂಬಾ ಹಾನಿಯಾಗಿದೆ ಆ ಹಾನಿ ಸರಿದೂಗಿಸುವ ವಿಚಾರವಾಗಿ ಸೋಮವಾರ ದಿವಸ ಜಿಲ್ಲಾ ಸಚಿವರೊಂದಿಗೆ ಸಭೆ ಮಾಡಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.
ನಾವೂ ಸಹ ಬೆಳೆ ಹಾನಿ ಸಮೀಕ್ಷೆ ಮಾಡಿದ್ದೇವೆ ತಾಲೂಕಿನ ರಸ್ತೆಗಳಿಗೂ ಹಾನಿಯಾಗಿದೆ ಹಾನಿಯ ಅಂದಾಜು ಮಾಡಲು ಸೋಮವಾರ ಸಭೆ ಮಾಡುತ್ತೇವೆ ತ್ವರಿತವಾಗಿ ಸಭೆ ನಡೆಸಿ ಮರು ಬಿತ್ತನೆಗೆ ಅನುಕೂಲಕ್ಕಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆಸಿ ಪರಿಹಾರ ನೀಡಲಾಗುವುದು. ಎರಡು ಬ್ರಿಜ್ ನಿರ್ಮಾಣಕ್ಕಾಗಿ ಪಿಡಬ್ಲುಡಿ ಸಚಿವರ ಜೊತೆಗೆ ಮಾತನಾಡಿದ್ದೇನೆ ಎಂದರು.
ರೈತರು ಪೂರ್ವ ಮುಂಗಾರು ಮಳೆಗೆ ಬಿತ್ತನೆಯನ್ನು ಮಾಡಿದ್ದಾರೆ. ಆದರೆ ಪ್ರವಾಹ ಆಗಿರುವುದರಿಂದ ರೈತರಿಗೆ ಹಾನಿಯಾಗಿದೆ ಅದನ್ನು ಸರಿದೂಗಿಸಲು ಸೋಮವಾರ ಸಭೆಯನ್ನು ಜರಗಿಸಿ, ಸರಕಾರಕ್ಕೆ ಮನವಿಯನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ಬೆಣ್ಣೆಹಳ್ಳ ಅಗಲೀಕರಣ ಕಾಮಗಾರಿಗೆ ರೂ. ೨೦೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ಚರ್ಚಿಸಿ ಬೇಗನೆ ಯೋಜನೆಯನ್ನು ಅನಿಷ್ಠಾನಗೊಳಿಸಲು ಮನವಿ ಮಾಡಲಾಗಿದೆ. ಆದರೆ, ಮಳೆ ಪ್ರಾರಂಭವಾಗಿದ್ದರಿಂದ ಕಾಮಗಾರಿ ಪ್ರಾರಂಭಿಸುವದು ವಿಳಂಬವಾಗಿದೆ. ಮಳೆಗಾಲ ಮುಗಿದ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸಲಾಗುವದು ಎಂದರು
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಯವರು ಜೊತೆಗೂಡಿ ಪ್ರವಾಹದ ಪ್ರದೇಶಗಳನ್ನು ವೀಕ್ಷಿಸಿ, ಹಾನಿಗೊಳಗಾದ ಮನೆಗಳನ್ನು ನೋಡಿ, ಸಾರ್ವಜನಿಕರಿಗೆ ಆದ ತೊಂದರೆಗಳನ್ನು ಸರಿಪಡಿಸಲು ಕ್ರಮಕೈಗೊಂಡಿದ್ದಾರೆ ಎಂದು ಶಾಸಕರು ತಿಳಿಸಿದರು.
ಕೆಲವೊಂದು ಪ್ರದೇಶದಲ್ಲಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯೊಂದಿಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ಬೆಣ್ಣೆ ಹಳ್ಳ, ತುಪರಿ ಹಳ್ಳ, ಜೊತೆಗೆ ೫೬ ಉಪ ಹಳ್ಳಗಳು ತಾಲೂಕಿನಲ್ಲಿ ಇದ್ದು. ಈ ಎಲ್ಲ ಕಡೆಯಿಂದ ನವಲಗುಂದದತ್ತ ನೀರು ಬರುವುದರಿಂದ ಪ್ರವಾಹದ ಭೀತಿ ಉಂಟಾಗಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
*ವಿವಿಧ ಗ್ರಾಮಗಳಲ್ಲಿ ಮಳೆಹಾನಿ ವಿಕ್ಷಣೆ:*
ನವಲಗುಂದ ವಿಧಾನಸಭಾ ಮತಕ್ಷೆತ್ರ ವ್ಯಾಪ್ತಿಯ ಹುಬ್ಬಳ್ಳಿ ತಾಲೂಕಿನ ಹೆಬಸೂರ ಸಮೀಪದ ನಿಗರಿ ಹಳ್ಳದ ಬ್ರಿಜ್, ಸರಕಾರಿ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಗಿರುವ ಮಳೆ ಹಾನಿ, ಕೆಸರು, ಅವ್ಯವಸ್ಥೆಗಳ ಕುರಿತು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ,ಹುಬ್ಬಳ್ಳಿ ತಹಶಿಲ್ದಾರ ಜೆ.ಬಿ.ಮಜ್ಜಗಿ ಹಾಗೂ ಇತರರು ಇದ್ದರು.
ಬೆಣ್ಣಹಳ್ಳದಿಂದ ಬಾಧಿತವಾದ ಅರೆಕುರಹಟ್ಟಿ ಗ್ರಾಮದ ಮನೆಗಳನ್ನು ಹಾಗೂ ರಸ್ತೆ ವಿಕ್ಷಣೆ ಮಾಡಿದ ಸಚಿವರು ಶಾಶ್ವತ ಪರಿಹಾರಕ್ಕೆ ಕ್ರಮವಹಿಸುವದಾಗಿ ತಿಳಿಸಿದರು. ಅಲ್ಲಿಂದ ಯಮನೂರ ಕರ್ಲವಾಡ ಮಧ್ಯದಲ್ಲಿರುವ ಬ್ರಿಜ್ ವಿಕ್ಷಣೆ ಮಾಡಿ, ರೈತರ ಬಿತ್ತನೆ ಹಾಗೂ ರೈತರ ಕೃಷಿ ಚಟುವಟಿಕೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕರ್ಲವಾಡ ಗ್ರಾಮದಲ್ಲಿ ಬೆಳೆಹಾನಿಗೆ ಪರಿಹಾರ ನೀಡುವಂತೆ ಹಾಗೂ ಬೆಣ್ಣೆ ಹಳ್ಳದ ತೊಂದರೆ ತಪ್ಪಿಸಲು ರೈತರಿಂದ ಸಚಿವರಿಗೆ ಮನವಿ ಮಾಡಿದರು.
ನಂತರ ಅವರು ನವಲಗುಂದ ಪಟ್ಟಣದ ಚರಂಡಿ ವ್ಯವಸ್ತೆ, ನವಲಗುಂದ-ಇಬ್ರಾಹಿಂಪುರ ರಸ್ತೆಯಲ್ಲಿ ಬರುವ ಅಂಬಲಿ ಹಳ್ಳ ಮತ್ತು ದೇಸಾಯಿ ಹಳ್ಳದ ಬ್ರಿಜ್, ರಸ್ತೆ, ರೈತರ ಬದು, ಒಡ್ಡುಗಳು ಮಳೆಗೆ ಹಾನಿ ಆಗಿರುವ ಕುರಿತು ಪರಿಶೀಲಿಸಿ, ವಿವರ ಪಡೆದುಕೊಂಡರು.
ನಂತರ ನಗರದಿಂದ ಇಬ್ರಾಹಿಂಪುರ ರಸ್ತೆಯಲ್ಲಿರುವ ಎಸ್. ಎಸ್. ಭಾಗಿ ಶಾಲೆಗೆ ಭೇಟಿ ನೀಡಿ, ಅಂಬಲಿ ಹಾಗೂ ಬಾಸನೂರಿನ ಸರವಿನ ಹಳ್ಳ ಬ್ರಿಡ್ಜ್ ಕಾಮಗಾರಿಗೆ ಅನುಮೋದನೆಗೆ ಪ್ರಸ್ತಾವನೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
*ಮಂಡಕ್ಕಿ ಮಿರ್ಚಿ ಸವಿದ ಸಚಿವರು:* ನವಲಗುಂದ ನಗರದ ಶೆಟ್ಟರಕೆರೆಯ ಹತ್ತಿರ ಮಳೆ ನೀರು ಹೊರಚೆಲ್ಲಿ ರಸ್ತೆಯಲ್ಲಿ ನಿಂತು ಸಂಚಾರಕ್ಕೆ ತೊಂದರೆ ಮಾಡಿದ್ದ ಒಳಚರಂಡಿಯ ವೀಕ್ಷಣೆ ಬಳಿಕ ಪಕ್ಕದಲ್ಲಿರುವ ಡಬ್ಬಿಅಂಗಡಿಯಲ್ಲಿ ಜನ ಸಾಮಾನ್ಯರಂತೆ ಕುಳಿತು ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳ ಜೊತೆಯಲ್ಲಿ ಮಿರ್ಚಿ, ಮಂಡಕ್ಕಿ ಸವಿದರು. ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಹಾಗೂ ಇತರರು ಸಾಥ ನೀಡಿದರು.
*ಬೈಕ್ ಹತ್ತಿ ಪ್ರವಾಹ ಪ್ರದೇಶವನ್ನು ಸುತ್ತಿದ ಶಾಸಕ ಮತ್ತು ಸಚಿವರು:*
ನವಲಗುಂದ ತಾಲೂಕಿನಲ್ಲಿ ಪ್ರವಶಹ ಪಿಡೀತ ಹಾಗೂ ಮಳೆ ಹಾನಿ ಪ್ರದೇಶ ವೀಕ್ಷಣೆ ಪ್ರವಾಸ ಕೈಗೊಂಡಿದ್ದ
ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಶಾಸಕ ಎನ್.ಎಚ್.ಕೋನರಡ್ಡಿ ಅವರೊಂದಿಗೆ ಹೀರೋ ಹೊಂಡಾ ಬೈಕ್ ಏರಿ ತಾಲೂಕಿನ ಕರ್ಲವಾಡ ಗ್ರಾಮದಲ್ಲಿ ಬೆಣ್ಣೆ ಹಳ್ಳದಿಂದ ಬಾಧಿತವಾಗುವ ಎಸ್.ಸಿ. ಕಾಲೋನಿ, ಲಕ್ಷ್ಮಿನಗರ ಪ್ರದೇಶಗಳನ್ನು ವೀಕ್ಷಣೆ ಮಾಡಿದರು.
ಸಚಿವರನ್ನು ಬೈಕ್ ಮೇಲೆ ನೋಡಿದ ಅನೇಕರು ಮನೆ ಬಾಗಿಲ್ಲಿ ನಿಂತು ಕೈ ಮುಗಿದರು. ಕೆಲವರು ವಾಹನ ನಿಲ್ಲಿಸಿ, ತಮ್ಮ ಸಮಸ್ಯೆ ತಿಳಿಸಿದರು. ಸಚಿವರ ಬೈಕ್ ಸಂಚಾರ ಗ್ರಾಮಸ್ಥರಲ್ಲಿ ಆಶ್ಚರ್ಯ ಮತ್ತು ಅಭಿಮಾನ ಮೂಡಿಸಿತು.
ಜಿಲ್ಲಾ ಉಸ್ತುವಾರಿ ಸಚಿವರ ಮಳೆಹಾನಿ ಪ್ರದೇಶ ವಿಕ್ಷಣೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ತಹಶಿಲ್ದಾರ ಸುದೀರ ಸಾಹುಕಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಉಪನಿರ್ದೇಶಕ ಸಂದೀಪ,ತಾ ಪಂ ಇಒ ಭಾಗ್ಯಶ್ರೀ ಜಾಗೀಧಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ಹಿರಿಯ ಕಾರ್ಮಿಕ ನಿರೀಕ್ಷಕಿ ಭುವನೇಶ್ವರಿ ಕೋಟಿಮಠ, ಸಿಪಿಐ ಶಿವಾನಂದ ಕಟಗಿ ಸೇರಿದಂತೆ ಪಂಚಾಯತರಾಜ್ ಇಂಜನಿಯರಿಂಗ್, ಪಂಚಾಯತ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಲೋಕೋಪಯೋಗಿ ಇಲಾಖೆ, ನವಲಗುಂದ ಪುರಸಭೆ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article