ಬೆಂಗಳೂರು, ಮಾರ್ಚ್ 07): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಮಾ.7) ತಮ್ಮ ದಾಖಲೆಯ ಹದಿನಾರನೇ ಬಜೆಟ್ ಮಂಡಿಸಿದ್ದಾರೆ. 2025ನೇ ಸಾಲಿನ ಕರ್ನಾಟಕ ಬಜೆಟ್ನ ಗಾತ್ರದ ಮೊತ್ತ ನಾಲ್ಕು ಲಕ್ಷ ಕೋಟಿ ರೂಪಾಯಿ. ಇನ್ನು ಈ ಬಜೆಟ್ನಲ್ಲಿ ಅಲ್ಪಸಂಖ್ಯಾತರು ಅಂದರೆ, ಮುಸ್ಲಿಂ ಕ್ರಿಶ್ಚಿಯನ್ ಸಮುದಾಯಕ್ಕೂ ಕೊಡುಗೆ ನೀಡಿದ್ದಾರೆ.
ಇದರಿಂದ ಸಿಡಿದೆದ್ದಿರುವ ವಿಪಕ್ಷ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಸಿದ್ದರಾಮಯ್ಯ ಬಜೆಟ್ ವಿರುದ್ಧ ಕ್ರೋಶ ಹೊರಹಾಕುತ್ತಿವೆ. ಇದೊಂದು ಸಾಬರ ಬಜೆಟ್, ರಂಜಾನ್ ಹಬ್ಬಕ್ಕೆ ಈ ಬಜೆಟ್ನಲ್ಲಿ ಭರ್ಜರಿ ಕೊಡುಗೆ ನೀಡಲಾಗಿದೆ. ಹಲಾಲ್ ಬಜೆಟ್, ಪಾಕಿಸ್ತಾನ್ ಬಜೆಟ್ ಅಂತೆಲ್ಲಾ ಟೀಕೆಗಳನ್ನು ಮಾಡುತ್ತಿವೆ. ಇದೀಗ ಇದಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.