ಬೆಂಗಳೂರು, ಫೆಬ್ರವರಿ 10: ಕರ್ನಾಟಕ ಬಿಜೆಪಿ ಅಂತಃಕಲಹ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯಾಧ್ಯಕ್ಷ ಪಟ್ಟದಿಂದ ವಿಜಯೇಂದ್ರರನ್ನು ಕೆಳಕ್ಕಿಳಿಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ನಾಯಕರ ಗುಂಪು ಶತಪ್ರಯತ್ನ ಮಾಡುತ್ತಿದೆ. ಆದರೆ, ಇದಕ್ಕೆ ಕೌಂಟರ್ ಕೊಡುತ್ತಿರುವ ವಿಜಯೇಂದ್ರ, ನಾನಾ ವ್ಯೂಹ ಹೆಣೆಯುತ್ತಿದ್ದಾರೆ. ಇದೇ ಹೊತ್ತಲ್ಲೇ ವಿಜಯೇಂದ್ರ ಮತ್ತು ಯತ್ನಾಳ್ ಇಬ್ಬರೂ ಕೇಂದ್ರ ಸಚಿವ ಸೋಮಣ್ಣ ಮನೆ ಪೂಜೆ ನೆಪದಲ್ಲಿ ದೆಹಲಿಯಲ್ಲಿ ತಂತ್ರಗಾರಿಕೆ ಮಾಡುತ್ತಿದ್ದಾರೆ.
ಬಿಜೆಪಿ ಬಂಡಾಯ ಮತ್ತೊಮ್ಮೆ ದೆಹಲಿಗೆ ಸ್ಥಳಾಂತರ
![ಬಿಜೆಪಿ ಬಂಡಾಯ ಮತ್ತೊಮ್ಮೆ ದೆಹಲಿಗೆ ಸ್ಥಳಾಂತರ ಬಿಜೆಪಿ ಬಂಡಾಯ ಮತ್ತೊಮ್ಮೆ ದೆಹಲಿಗೆ ಸ್ಥಳಾಂತರ](https://hasirukranti.in/wp-content/uploads/2025/02/07-4-860x484.jpg)
ಸೋಮಣ್ಣ ಮನೆ ಪೂಜೆಗೆ ಹೋಗುತ್ತಿದ್ದೇವೆ ಎಂದು ಎರಡೂ ಬಣದ ನಾಯಕರು ಹೇಳಿದ್ದರೆ, ಅತ್ತ ‘ನಾನು ಯಾರನ್ನೂ ಕರೆದಿಲ್ಲ’ ಎಂದು ಸೋಮಣ್ಣ ಖಡಾಖಂಡಿತವಾಗಿ ಹೇಳಿದ್ದಾರೆ. ಹೀಗಾಗಿ, ಹೈಕಮಾಂಡ್ ಭೇಟಿಗೆ ಇಬ್ಬರೂ ಮುಂದಾಗಿದ್ದಾರಾ ಎಂಬ ಅನುಮಾನ ಸಹಜವಾಗಿ ಮೂಡಿದೆ. ದಾವಣಗೆರೆ ಪ್ರವಾಸಕ್ಕೆ ಹೋಗುತ್ತಿದ್ದ ವಿಜಯೇಂದ್ರಗೆ ಹೈಕಮಾಂಡ್ನಿಂದ ಬುಲಾವ್ ಬಂದಿದೆ. ಹೀಗಾಗಿ ದಾವಣಗೆರೆ ಪ್ರವಾಸ ರದ್ದು ಮಾಡಿದ ದೆಹಲಿ ವಿಮಾನ ಹತ್ತಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಯತ್ನಾಳ್ ಬಣದ ಮೀಟಿಂಗ್: ಯತ್ನಾಳ್ ಬಣ ದೆಹಲಿಯಿಂದ ವಾಪಸ್ ಆಗಿ ವಾರವೂ ಆಗಿಲ್ಲ. ದಾವಣಗೆರೆಯ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಗೆಸ್ಟ್ ಹೌಸ್ನಲ್ಲಿ ಯತ್ನಾಳ್ ಬಣದ ನಾಯಕರು ಭಾನುವಾರ ಸಭೆ ಸೇರಿದ್ದಾರೆ. ಮುಂದಿನ ಹೋರಾಟಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಂಸದ ಬಸವರಾಜ್ ಬೊಮ್ಮಾಯಿ ಜೊತೆಗೆ ವಾಲ್ಮೀಕಿ ಜಾತ್ರೆಯ ವೇದಿಕೆ ಹಂಚಿಕೊಂಡಿದ್ದಾರೆ. ಬೊಮ್ಮಾಯಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ತಟಸ್ಥ ಬಣವೂ ಪರಿವರ್ತನೆಯಾಗಿದೆ ಎಂದಿದ್ದಾರೆ.