‘ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಚಾರ’ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

Ravi Talawar
‘ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಚಾರ’ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
WhatsApp Group Join Now
Telegram Group Join Now

ಬೆಂಗಳೂರು, ಜೂನ್‌ 24: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಚಾರ ಮಾಡಿದ್ದ ಕಾಂಗ್ರೆಸ್ ಪಕ್ಷ ಮತ್ತು​ ನಾಯಕ ರಾಹುಲ್‌ ಗಾಂಧಿ ರಾಮ್‌ಲೀಲಾ ಮೈದಾನದಲ್ಲಿ ತಲೆಬಾಗಿ ನಿಂತು ಜನರಿಗೆ ಕ್ಷಮೆ ಕೇಳಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿಯಿಂದ ನಡೆದ ತುರ್ತು ಪರಿಸ್ಥಿತಿ ಸಂಬಂಧ ರಾಹುಲ್‌ ಗಾಂಧಿ ಕ್ಷಮೆ ಕೋರಬೇಕೆಂಬ ಆಗ್ರಹದ ಪೋಸ್ಟರ್‌ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಮೂಲೆಗೆ ತಳ್ಳಿ ಸರ್ವಾಧಿಕಾರಿ ಧೋರಣೆ ತೋರಿದ ಕಾಂಗ್ರೆಸ್‌ ಪಕ್ಷ ಹಾಗೂ ಇಂದಿರಾ ಗಾಂಧಿ ರಾತ್ರೋರಾತ್ರಿ ತುರ್ತು ಪರಿಸ್ಥಿತಿ ಹೇರಿದ್ದರು. ನ್ಯಾಯಾಂಗ ವ್ಯವಸ್ಥೆಯನ್ನು ಕಪಿಮುಷ್ಟಿಗೆ ತೆಗೆದುಕೊಂಡು, ಪತ್ರಕರ್ತರನ್ನು ಜೈಲಿಗೆ ಹಾಕಿದ್ದರು. ಎಲ್‌.ಕೆ.ಅಡ್ವಾಣಿ, ಅಟಲ್‌ ಬಿಹಾರಿ ವಾಜಪೇಯಿ ಮೊದಲಾದ ಘಟಾನುಘಟಿ ನಾಯಕರನ್ನು ಜೈಲಿಗೆ ತಳ್ಳಿದ್ದರು ಎಂದರು.

ಆಗ ನಾನು ವಿವಿ ಪುರ ಕಾಲೇಜಿನಲ್ಲಿ ಮೊದಲ ಪಿಯುಸಿ ವಿದ್ಯಾರ್ಥಿಯಾಗಿದ್ದೆ. ಯಶವಂತಪುರ ಸರ್ಕಲ್‌ನಲ್ಲಿ ಆರ್‌ಎಸ್‌ಎಸ್‌ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಇಂದಿರಾಗಾಂಧಿ ವಿರುದ್ಧ ಎರಡು ವಾಕ್ಯ ಘೋಷಣೆ ಕೂಗಿದ್ದೆ. ಆಗ ಯಶವಂತಪುರ ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದ್ದರು. ನಮ್ಮ ಇಡೀ ಕುಟುಂಬದಲ್ಲಿ ಆರ್‌ಎಸ್‌ಎಸ್‌ನವರೇ ಇದ್ದರು. ಅವರು ಕೂಡ ತಲೆಮರೆಸಿಕೊಳ್ಳಬೇಕಾಯಿತು. ನಾನು ಒಂದು ತಿಂಗಳು ಸ್ವಾತಂತ್ರ್ಯ ಉದ್ಯಾನದ ಜೈಲಿನಲ್ಲಿದ್ದೆ. 200 ಜನರಿಗೆ ಒಂದು ಶೌಚಾಲಯವಿತ್ತು. ಊಟ ಕೂಡ ಕೊಡುತ್ತಿರಲಿಲ್ಲ. ಆ ಕಷ್ಟಗಳು ಈಗಲೂ ನೆನಪಿನಲ್ಲಿದೆ. ಜನರಿಗೆ ಅಷ್ಟು ಕಿರುಕುಳ ನೀಡಿದ ಕಾಂಗ್ರೆಸ್‌ ಈಗ ಅಧಿಕಾರದಲ್ಲಿದೆ ಎಂದು ಕಿಡಿಕಾರಿದರು.

 

WhatsApp Group Join Now
Telegram Group Join Now
Share This Article