ಬಳ್ಳಾರಿ.06..: ಪಾಕಿಸ್ತಾನದ ಪ್ರಜೆಗಳು ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ವಾಸವಾಗಿದ್ದರು, ಅವರನ್ನು ಗುರುತಿಸಿ, ಅವರ ವೀಸಾವನ್ನು ರದ್ದು ಮಾಡಿ ಕೂಡಲೇ ಪಾಕಿಸ್ತಾನಕ್ಕೆ ಮರಳಿ ಕಳುಹಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಬಿಜೆಪಿ ಜಿಲ್ಲಾ ಸಮಿತಿ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಅವರು ಮಾತನಾಡಿ, ಕೇಂದ್ರ ಸರ್ಕಾರದ ಖಡಕ್ ಸೂಚನೆಯಂತೆ ಜಿಲ್ಲೆಯಲ್ಲಿ ವಾಸವಾಗಿರುವ ಪಾಕಿಸ್ತಾನಿ ಪ್ರಜೆಗಳನ್ನು ಪತ್ತೆ ಹಚ್ಚಿ ಕೂಡಲೇ ಅವರ ವೀಸಾವನ್ನು ರದ್ದು ಮಾಡಿ, ಅವರನ್ನ ಅವರ ರಾಷ್ಟ್ರಕ್ಕೆ ಕಳಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಯಾವುದೇ ಮೂಲೆಯಲ್ಲಿದ್ದರೂ ಅವರನ್ನು ಹುಡುಕಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಕಳೆದ ಏ.22 ರಂದು ಜಮ್ಮು ಕಾಶ್ಮೀರ ದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಿ ಸುಮಾರು 26ಕ್ಕೂ ಹೆಚ್ಚು ಅಮಾಯಕ ಪ್ರವಾಸಿಗರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಧರ್ಮ ಕೇಳಿ ಹತ್ಯೆ ಮಾಡಿದ ಕ್ರಮ ಅತ್ಯಂತ ಖಂಡನೀಯ, ಇದು ಪಾಕಿಸ್ತಾನಿಗಳ ನೆರವಿನಿಂದ ನಡೆದ ಹೇಯ ಕೃತ್ಯವಾಗಿದೆ. ಈ ಅತ್ಯಂತ ದಾರುಣವಾದ ದಾಳಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಸoಸ್ಥೆಯಾದ ಐಎಸ್ ಐ ಸಂಘಟನೆ ನೆರೆವಿನಿಂದ ಪಾಕಿಸ್ತಾನ ಸೇನೆ ಇಡಿ ದಾಳಿಯ ಯೋಜನೆಯನ್ನು ರೂಪಿಸಿದೆ, ಇಂತಹ ಬರ್ಬರ ಹತ್ಯೆ ಕಾoಡವನ್ನು ಅರಗಿಸಿಕೊಳ್ಳಲಾಗದೇ ಇಡೀ ದೇಶ ಅತ್ಯಂತ ದೊಡ್ಡ ಆಘಾತಕ್ಕೊಳಗಾಗಿದೆ. ಈ ಘಟನೆಯನ್ನು ಖಂಡಿಸಿದ ಜಗತ್ತಿನ ಎಲ್ಲ ದೊಡ್ಡ ಶಕ್ತಿ ಶಾಲಿ ರಾಷ್ಟ್ರಗಳು ನಮ್ಮ ಭಾರತದ ಜೊತೆ ನಿಲ್ಲುವುದಾಗಿ ಘೋಷಿಸಿದ್ದು, ಪಾಪಿ ಪಾಕಿಸ್ತಾನಕ್ಕೆ ನಡುಕು ಹುಟ್ಟಿಸಿದೆ ಎಂದರು.
ಈ ಕೃತ್ಯಕ್ಕೆ ಕಾರಣರಾದವರು ಯಾರೇ ಇರಲಿ, ಅವರನ್ನು ಹಾಗೂ ಅವರಿಗೆ ಸಹಕರಿಸಿದವರನ್ನು ಹುಡುಕಿ ಹುಡುಕಿ ತಕ್ಕ ಪಾಠ ಕಲಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿಜ್ಞೆ ಮಾಡಿದ್ದಾರೆ. ನಮ್ಮ ಭಾರತೀಯ ಸೇನೆಗಳಿಗೆ ಮೋದಿ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಕ್ತವಾಗಿ ಅನುಮತಿ ನೀಡಿದ್ದಾರೆ.
ಇಡಿ ದೇಶದ 140 ಕೋಟಿ ಜನರು ಪ್ರಧಾನಿ ಮೋದಿ ಹಾಗೂ ನಮ್ಮ ಸೇನಾ ಪಡೆಗಳ ಜೊತೆಗೆ ತೊಡೆತಟ್ಟಿ ನಿಂತಿದ್ದಾರೆ. ಈ ದುರ್ಘಟನೆಯ ಬಳಿಕ ಕೇಂದ್ರ ಸರ್ಕಾರ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸಿಂಧೂ ನದಿ ನೀರಿನ ಒಪ್ಪಂದಕ್ಕೆ ಇತಿಶ್ರೀ ಹಾಡಿ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಇದರ ಜೊತೆಗೆ ಪಾಕಿಸ್ತಾನ ದೊಂದಿಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿದೆ.
ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಬರುವ ವೀಸಾ ನಿಲ್ಲಿಸಿದೆ. ನಿಯಮಿತ ಸಮಯದಲ್ಲಿ ಭಾರತದಲ್ಲಿರುವ ಎಲ್ಲ ಪಾಕಿಸ್ತಾನಿ ಪ್ರಜೆಗಳು ಕೂಡಲೇ ಹಿಂತಿರಗಬೇಕು ಎಂದು ಖಡಕ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ನಮ್ಮ ಬಳ್ಳಾರಿ ಜಿಲ್ಲೆಯ ಯಾವುದೇ ಮೂಲೆಯಲ್ಲಿದ್ದರೂ ಅವರನ್ನು ಪತ್ತೆ ಹಚ್ಚಿ ಅವರ ರಾಷ್ಟ್ರಕ್ಕೆ ಕೂಡಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಗುಣಾ ರೆಡ್ಡಿ, ಓಂ ಪ್ರಕಾಶ್, ಪಾಲಿಕೆ ಮಾಜಿ ಸದಸ್ಯ ಎಸ್.ಮಲ್ಲನ ಗೌಡ, ವೆಮಣ್ಣ ಸೇರಿದಂತೆ ವಿವಿಧ ಮುಖಂಡರು ಇದ್ದರು.