ಜಮಖಂಡಿ;ಜಂಗಲರಾಜನ ಕಹಿ ಅನುಭವದ ವಿರುದ್ಧ ಬಿಹಾರ ಜನತೆ ಮತದಾನ ಮಾಡಿದ್ದಾರೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ಶನಿವಾರ ನಗರದ ಹನುಮಾನ ಚೌಕ್ನಲ್ಲಿ ಬಿಜೆಪಿವತಿಯಿಂದ ಏರ್ಪಡಿಸಿದ್ದ ವಿಜಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಬಿಹಾರದ ಜನತೆ ಅಭಿವೃದ್ಧಿ, ರಕ್ಷಣೆ, ಉದ್ಯೋಗ, ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತದಾನ ಮಾಡಿದ್ದು 203 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್ಡಿಎ ಐತಿಹಾಸಿಕ ದಾಖಲೆ ಮಾಡಿದೆ. ರಾಜ್ಯ ಸರ್ಕಾರದ ಪಂಚಗ್ಯಾರಂಟಿಗಳ ನೆಪದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಲಕ್ಷಿಸಿದೆ. ಇದರಿಂದ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ದೊರೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ತುಂಗಳ ಮಾತನಾಡಿ ಬಿಹಾರದ ಪ್ರಜ್ಞಾವಂತ ಮತದಾರರು ಪ್ರಭುದ್ಧತೆ ಯಿಂದ ಮತ ಚಲಾಯಿಸಿದ್ದಾರೆ. ಅಭಿವೃದ್ದಿಗೆ ಮತಗಳು ದೊರೆತಿವೆ. ನಿತಿಶ ಕುಮಾರ ಅವರ ಜನಪರ ಆಡಿತಕ್ಕೆ ಮತ್ತೆ ಮತದಾರರು ಅವಕಾಶ ನೀಡಿದ್ದಾರೆ ಎಂದು ಹೇಳಿದರು.
ಮುಖಂಡರಾದ ಏಗಪ್ಪ ಸವದಿ ಮಾತನಾಡಿ ಕಾಂಗ್ರೆಸ್ನ ಮುಖಂಡರ ಶತ ಪ್ರಯತ್ನಕ್ಕೆ ಬಿಹಾರದ ಪ್ರಜ್ಞಾವಂತ ಜನರು ಸೊಪ್ಪು ಹಾಕಿಲ್ಲ ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು, ದೇಶವು ಹಿಂದು ರಾಷ್ಟ್ರವಾಗಿದೆ ಹಾಗೂ ಉಳಿಯುತ್ತದೆ. ದೇಶದ ಸಮಗ್ರ ಅಭಿವೃದ್ಧಿ ಕೆವಲ ಬಿಜೆಪಿಯಿಂದ ಮಾತ್ರಸಾಧ್ಯ ಎಂಬುದು ಎಲ್ಲರಿಗೂ ತಿಳಿದಿದೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಅಭಿವೃದ್ಧಿಯತ್ತ ಗಮನ ಹರಿಸಿಲ್ಲ ಹಗಲು ದರೋಡೆ ನಡೆದಿದೆ ಎಂದು ಆರೋಪಿಸಿದರು. ಮುಖಂಡರಾದ ಸಿ.ಟಿ.ಉಪಾಧ್ಯಾಯ ಅಜಯ ಕಡಪಟ್ಟಿ,ರಾಜಾಸಾಬ ಕಡಕೋಳ, ಶಂಕರ ಕಾಳೆ, ಗಣೇಶ ಶಿರಗಣ್ಣವರ ಮುಂತಾದವರು ಮಾತನಾಡಿದರು. ಗ್ರಾಮೀಣ ಮಂಡಲ ಅಧ್ಯಕ್ಷ ಮಲ್ಲು ದಾನಗೌಡ, ಗೀತಾ ಸೂರ್ಯವಂಶಿ, ನಾಗರಾಜ, ಶ್ರೀಧರ ಕಂಬಿ, ಸುನೀಲ, ವಿನಾಯಕ ಗವಳಿ, ಗುರುಪಾದಪ್ಪ ಮೆಂಡಿಗೇರಿ, ಸೇರಿದಂತೆ ಅನೇಕ ಕಾರ್ಯಕರ್ತರು ಮುಖಂಡರು ಇದ್ದರು. ನಗರದ ಹನುಮಾನ ಚೌಕ್ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.


