ಬೆಂಗಳೂರು, ಸೆಪ್ಟೆಂಬರ್ 23: ಪರಿಸರಕ್ಕೆ ಒಳ್ಳೆಯದಾಗಬೇಕು. ಬೆಂಗಳೂರು ನಗರ ಹಸಿರಿನಿಂದ ಕಂಗೊಳಿಸಬೇಕು ಎಂದು ಈ ಹಿಂದಿನ ಬೆಂಗಳೂರು ಮಹಾನಗರ ಪಾಲಿಕೆ ನಗರದಾದ್ಯಂತ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನೆಟ್ಟು ಬೆಳೆಸಿದ್ದ 25000ಕ್ಕೂ ಹೆಚ್ಚು ಗಿಡಗಳನ್ನು ಕಡಿಯಬೇಕಾದ ಅನಿವಾರ್ಯತೆ ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಎದುರಾಗಲಿದೆ. ಇದಕ್ಕೆ ಕಾರಣ, ಕೊನೊಕಾರ್ಪಸ್ ಟ್ರೀ (Conocarpus Tree / ಕಾಂಡ್ಲಾ ಪ್ರಭೇದದ ಒಂದು ಗಿಡ) ಪ್ರಭೇದ ಮಾನವನ ಆರೋಗ್ಯಕ್ಕೆ ಮತ್ತು ಪರಿಸರ ವ್ಯವಸ್ಥೆಗೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿರುವುದು. ಕೊನೊಕಾರ್ಪಸ್ ಟ್ರೀ ಪ್ರಭೇದ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್ನ ಸೆಂಟ್ರಲ್ ಎಂಪವರ್ಡ್ ಕಮಿಟಿ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ಪರಿಣಾಮವಾಗಿ ಇದೀಗ, ಕಾನ್ಕಾರ್ಪಸ್ ಟ್ರೀಗಳ ತೆರವಿಗೆ ಆದೇಶ ಹೊರಡಿಸಲು ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಚಿಂತನೆ ನಡೆಸಿದೆ.
ನಗರವು ಹಸಿರಾಗಿ ಸುಂದರವಾಗಿ ಕಾಣಬೇಕು ಎಂಬ ಉದ್ದೇಶದೊಂದಿಗೆ ರಸ್ತೆಬದಿಗಳು, ಮೈದಾನಗಳ ಬದಿಗಳಲ್ಲಿ ಮತ್ತು ಖಾಲಿ ಜಾಗಗಳಲ್ಲಿ ಬಿಬಿಎಂಪಿ ಸಾವಿರಾರು ಕೊನೊಕಾರ್ಪಸ್ ಸಸಿಗಳನ್ನು ನೆಟ್ಟಿತ್ತು. ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು ಹಾಗೂ ಇತರ ಸಂಘ-ಸಂಸ್ಥೆಗಳ ಜತೆಗೂಡಿ ಬಿಬಿಎಂಪಿ ಈ ಕೆಲಸ ಮಾಡಿತ್ತು. ಗಿಡಗಳು ವೇಗವಾಗಿ, ಬೆಂಗಳೂರಿನ ವಾತಾವರಣಕ್ಕೆ ಹೊಂದಿಕೊಂಡು ಬೆಳೆದು ದೊಡ್ಡದಾಗುತ್ತಿವೆ. ಇದೇ ಸಂದರ್ಭದಲ್ಲಿ ಇದೀಗ ಸಾವಿರಾರು ಗಿಡಗಳ ಮಾರಣಹೋಮ ಮಾಡಬೇಕಾದ ಅನಿವಾರ್ಯತೆಗೆ ಜಿಬಿಎ ಸಿಲುಕುವ ಎಲ್ಲ ಸಾಧ್ಯತೆಗಳಿವೆ.
ಹಲವಾರು ರಾಜ್ಯಗಳಿಂದ ಬಂದ ದೂರುಗಳನ್ನು ಪರಿಶೀಲಿಸಿದ ಸಿಇಸಿ, ಪರಿಸರ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಿತ್ತು. ಅಲ್ಲದೆ, ಕೊನೊಕಾರ್ಪಸ್ ಸಸಿಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಕಲೆಹಾಕಿತ್ತು. ನಂತರ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಿತ್ತು.


