ಸಿರುಗುಪ್ಪ, ಮಾ.14::..ತಾಲೂಕಿನ ಬಂಡ್ರಾಳ್ ಗ್ರಾಮದಲ್ಲಿ ಶ್ರೀ ಪೊಂಪಯ್ಯ ತಾತನವರ 34ನೇ ಪುಣ್ಯಸ್ಮರಣೆಯ ಅಂಗವಾಗಿ ಶ್ರೀ ಪೊಂಪಯ್ಯತಾತ ಸೇವಾ ಟ್ರಸ್ಟ್ ವತಿಯಿಂದ “ಪಾಂಡು ವಿಜಯ” ಅರ್ಥಾತ್ “ಕೀಚಕನ ವಧೆ” ಬಯಲಾಟ ನಾಟಕವನ್ನು ಗುರುವಾರ ಸಂಜೆ ಆಯೋಜಿಸಲಾಯಿತು.
ಸಂಜೆ 8.30 ಗಂಟೆಗೆ ಆರಂಭವಾದ ಬಯಲಾಟ ಕಾರ್ಯಕ್ರಮವು ಗ್ರಾಮಸ್ಥರ ಹಾಗೂ ಸದ್ಭಕ್ತರ ಸಹಕಾರದಿಂದ ಭಕ್ತಿಪೂರ್ವಕವಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಡ್ರಾಳ್ ಗ್ರಾಮದ ಎಂ. ಮೃತ್ಯುಂಜಯ ಸ್ವಾಮಿ (ವಕೀಲರು) ವಹಿಸಿದ್ದರು.

ಅವರು ಮಾತನಾಡಿ, ಬಯಲಾಟವು ಬಳ್ಳಾರಿ ಜಿಲ್ಲೆಯ ಜನರಿಗೆ ಬಹಳ ಮೆಚ್ಚಿನ ಜನಪದ ಕಲೆಯಾಗಿದ್ದು ಸಮಾಜವನ್ನು ತಿದ್ದುವ ಶಕ್ತಿ ಹೊಂದಿದೆ ಎಂದು ಹೇಳಿದರು. ಬಯಲಾಟಗಳ ಮೂಲಕ ಗ್ರಾಮೀಣ ಭಾಗದ ಅನಕ್ಷರಸ್ಥ ಪ್ರತಿಭಾವಂತ ಕಲಾವಿದರು ಹೊರಹೊಮ್ಮಿದ್ದು, ಈ ಕಲೆಯನ್ನು ಉಳಿಸಿ ಬೆಳೆಸಲು ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕೆಂದು ಅಭಿಪ್ರಾಯಪಟ್ಟರು. ಶ್ರೀ ಪೊಂಪಯ್ಯ ತಾತನವರ ಪುಣ್ಯಸ್ಮರಣೆಯ ಅಂಗವಾಗಿ ಬಯಲಾಟ ಆಯೋಜಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಸಮಾಜ ಸೇವಕರೂ ಉದ್ಯಮಿಗಳೂ ಆದ ಆರ್. ಸದಾಶಿವ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಯಲಾಟಗಳಲ್ಲಿ ಮಹಾಭಾರತ ಹಾಗೂ ರಾಮಾಯಣದಂತಹ ಐತಿಹಾಸಿಕ ಕಥೆಗಳು ಜೀವಂತವಾಗಿ ಮೂಡಿ ಬರುತ್ತವೆ. ಇವು ಜನರ ಮನಸ್ಸಿನ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ. ಆದ್ದರಿಂದ ಎಲ್ಲರೂ ಬಯಲಾಟಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಈ ಕಲೆಯನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ನರಸಿಂಹ ಜೋಶಿ ಮತ್ತು ವೆಂಕಟೇಶ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಮರೆಗೌಡ (ತಾ.ಪಂ. ಮಾಜಿ ಸದಸ್ಯರು), ಹನುಮಯ್ಯ, ಸಣ್ಣಪ್ಪ, ದಬಾಡಿ ಮಲ್ಲಯ್ಯ, ವೆಂಕಟೇಶ್ ರೆಡ್ಡಿ, ಬಸವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾತ್ರಿ 8.30 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ನಡೆದ “ಪಾಂಡು ವಿಜಯ (ಕೀಚಕನ ವಧೆ)” ಬಯಲಾಟವನ್ನು ಬಂಡ್ರಾಳ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಕಣ್ತುಂಬಿಕೊಂಡರು.


