ಮೂಡಲಗಿ : ಅರಭಾವಿ, ಕಲ್ಲೋಳಿ, ನಾಗನೂರು ಮತ್ತು ಮೂಡಲಗಿ ಪಟ್ಟಣಗಳ ವ್ಯಾಪ್ತಿಯ ಸಾರ್ವಜನಿಕರಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸಿಕೊಡುವ ಅಮೃತ ಯೋಜನೆಗೆ ಚಾಲನೆ ನೀಡಲಾಗಿದ್ದು, ವರ್ಷದೊಳಗೆ ಕಾಮಗಾರಿ ಪೂರ್ಣಗೊಂಡು ಪ್ರತಿ ಮನೆ ಮನೆಗಳಿಗೆ ಕುಡಿಯುವ ನೀರು ತಲುಪಲಿದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬುಧವಾರದಂದು ತಾಲೂಕಿನ ಅರಭಾವಿ ಪಟ್ಟಣದ ಆಂಜನೇಯ ದೇವಸ್ಥಾನದ ಹತ್ತಿರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಮೃತ 2.0 ಯೋಜನೆಯಡಿಯಲ್ಲಿ ಅಂದಾಜು 140.69 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅರಭಾವಿ, ಕಲ್ಲೋಳಿ, ನಾಗನೂರು ಪಟ್ಟಣ ಪಂಚಾಯತ್ ಮತ್ತು ಮೂಡಲಗಿ ಪುರಸಭೆಯ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರಿಗೆ ಕುಡಿಯುವ ನೀರು ಒದಗಿಸುವ ಮೂಲಕ ತಮ್ಮ 20 ವರ್ಷಗಳ ಕನಸು ಈಡೇರಿದಂತಾಗಿದೆ ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಜನರಿಗೆ ಕುಡಿಯಲಿಕ್ಕೆ ಶುದ್ಧ ನೀರು ಬರುತ್ತಿದೆ. ಇದಕ್ಕಾಗಿ ಅಮೃತ 2.0 ಯೋಜನೆಯನ್ನು ನಮ್ಮ ಬಿಜೆಪಿ ಸರ್ಕಾರವು ಅಸ್ತಿತ್ವಕ್ಕೆ ಇದ್ದ ಸಂದರ್ಭದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಮಂಜೂರಾತಿ ನೀಡಿದ್ದರು. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯೋಜನೆಯು ಕಾರ್ಯಗತವಾಗುತ್ತಿದೆ ಎಂದು ತಿಳಿಸಿದರು.
ಶಿರಢಾನ ಗ್ರಾಮದ ಹತ್ತಿರ (ಝಂಗಟಿಹಾಳ) ಘಟಪ್ರಭಾ ನದಿಯ ಎಡ ದಂಡೆಯಲ್ಲಿ ಜಾಕವೆಲ್, ಇಂಟೆಕ್ ವೇಲ್ ಮತ್ತು ಇಂಟೆಕ ಕೊಳವೆ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಇನ್ನು ರಸ್ತೆಗಳ ಅಭಿವೃದ್ಧಿ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅರಭಾವಿ, ಕಲ್ಲೋಳಿ, ನಾಗನೂರು ಮತ್ತು ಮೂಡಲಗಿ ಪುರಸಭೆಯಿಂದ ನಾಗರಿಕ ಸತ್ಕಾರ ಮಾಡಲಾಯಿತು.
ವೇದಿಕೆಯಲ್ಲಿ ವೇದಮೂರ್ತಿ ಶಿವಯ್ಯ ಹಿರೇಮಠ್, ಅರಭಾವಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರೇಣುಕಾ ಮಾದರ, ಉಪಾಧ್ಯಕ್ಷೆ ರಾಜಶ್ರೀ ಗಂಗಣ್ಣವರ, ಮೂಡಲಗಿ ಪುರಸಭೆಯ ಅಧ್ಯಕ್ಷೆ ಖುರ್ಷಾದ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಗಜಾನನ ಯರಗನ್ವಿ, ಬಸವಂತ ದಾಸನ್ನವರ, ಸುಭಾಸ್ ಕ್ಯತೆನ್ನವರ, ಶಂಕರ ಬಿಲಕುಂದೀ, ರಮೇಶ ಮಾದರ, ಮುತ್ತೆಪ್ಪ ಜಲ್ಲಿ, ರಾಮಪ್ಪ ಹಂದಿಗುಂದ, ರವಿ ಸಣ್ಣಕ್ಕಿ, ಹಣಮಂತ ಗುಡಲಮನಿ,ಗಣಪತಿ ಇಳಿಗೆರಿ, ಸುಭಾಸ್ ಕುರಬೇಟ, ಪ್ರಶಾಂತ್ ನಿಡಗುಂದಿ, ಪಟ್ಟಣ ಪಂಚಾಯತ್ ಮತ್ತು ಪುರಸಭೆ ಸದಸ್ಯರು, ಮುಖ್ಯಾಧಿಕಾರಿಗಳಾದ ವಿನಾಯಕ ಬಬಲೇಶ್ವರ, ತುಕಾರಾಂ ಮಾದರ, ಚಿದಾನಂದ್ ಮುಗಳಖೋಡ,ಕುಮಾರೇಶ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.