ರಾಜ್ಯ ಸರ್ಕಾರದ ಅಕಾಡೆಮಿ ಬಾಲಗೌರವ ಪ್ರಶಸ್ತಿ ಪಡೆದ ಕರಡಿ ಮಜಲು ಬಾಲಕಲಾವಿದ.
೫೦೦ ವರ್ಷಗಳ ಇತಿಹಾಸದ ಕರಡಿ ಮನೆತನ
ಮಹಾಲಿಂಗಪುರ: ಮಹಾಲಿಂಗಪುರದ ಕರಡಿ ಮನೆತನದ ಕುಡಿ ರಬಕವಿಯ ಶ್ರೀ ಪದ್ಮಾವತಿ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ೧೦ ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಅಭಿನವ ಕರಡಿಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಇಲಾಖೆ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ ೨೦೨೨-೨೩ ನೇ ಸಾಲೀನ ಬಹುಮುಖ ಪ್ರತಿಭೆ ಕ್ಷೇತ್ರದ * ಬಾಲ ಗೌರವ ಪ್ರಶಸ್ತಿ ಪಡೆದ ಕುವರ.
ಇದೇ ಡಿಸೆಂಬರ ೧೬ ರಂದು ಬೆಳಗಾವಿಯ ಸುವರ್ಣಸೌಧದ ಸಭಾಂಗಣದಲ್ಲಿ ಜರುಗಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು.ಸುಮಾರು ೨೨ ತಲೆಮಾರುಗಳಿಂದ ಕರಡಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಸನ್ ೧೮೮೨ ರಲ್ಲಿ ಮುಧೋಳ ಆಸ್ಥಾನದ ಕಲಾವಿದರಾಗಿ ಸೋಲಾಪೂರ ಮಹಾರಾಜರ ಮುಂದೆ ಕಾರ್ಯಕ್ರಮ ನೀಡಿ ಬಂಗಾರದ ಪದಕ ಪಡೆದವರು ಪಟ್ಟಣದ ಕರಡಿ ಮನೆತನದವರು.
ಸುಮಾರು ೫೦೦ ವರ್ಷಗಳಿಂದ ಪಟ್ಟಣದ ಶ್ರೀ ಮಹಾಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ನಿರಂತರ ತಮ್ಮ ಕರಡಿ ಕಲಾ ಸೇವೆ ಸಲ್ಲಿಸುತ್ತಿರುವ ಕಲಾವಿದರ ಮನೆತನದಲ್ಲಿ ಜನಿಸಿದ ಅಭಿನವ ಆತನ ಅಜ್ಜ ಗಂಗಪ್ಪ ತಂದೆ ಚಂದ್ರಶೇಖರ ಅವರಿಂದ ಕಲೆಯನ್ನು ರೂಢಿಸಿಕೊಂಡ.ಕೇವಲ ಮೂರು ವರ್ಷದವನಿದ್ದಾಗಿನಿಂದಲೂ ಕರಡಿ ಕಲಾ ಸೇವೆಯಲ್ಲಿ ತೊಡಗಿರುವ ಈತ ತನ್ನ ವಯಸ್ಸಿನ ಹುಡುಗರನ್ನುಕಟ್ಟಿಕೊಂಡು ಕಲಾ ತಂಡವನ್ನೆ ಕಟ್ಟಿದ್ದಾನೆ.ಹುನ್ನೂರಿನ ಶರಣ ಈಶ್ವರ ಮಂಟೂರ ಅವರು ಗುರುಕುಲ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಈತನಿಗೆ ಕಲೆ ಪ್ರದರ್ಶಿಸಲು ಅವಕಾಶ ನೀಡಿದ್ದರಿಂದ ಅಲ್ಲಿ ಸಂಗೀತಬ್ರಹ್ಮ ಹಂಸಲೇಖಾ ಅವರ ಸಮ್ಮುಖದಲ್ಲಿ ಕರಡಿ ಕಲೆ ಪ್ರದರ್ಶಿಸಿ ಅವರಿಂದ ಸೈ ಎನಿಸಿಕೊಂಡಿದ್ದಾನೆ.
ಪ್ರಶಸ್ತಿಗಳು : ಈಗಾಗಲೇ ಈತನಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಲಾ ಶ್ರೀ ಪ್ರಶಸ್ತಿ ನೀಡಿದೆ.ಬೆಳಗಾವಿ ಜಿಲ್ಲೆಯ ಬ್ಯಾಕೋಡದಲ್ಲಿ ಜರುಗಿದ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಂಸ್ಕೃತಿಕ ಸಮ್ಮೇಳನದಲ್ಲಿ ಕರ್ನಾಟಕ ಬಾಲ ಕಲಾ ರತ್ನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಸನ್ಮಾನಗಳು ಈತನ ಮುಡಿಗೇರಿವೆ.
ಅಭಿನವ ೧೧ ತಿಂಗಳ ಮುಗುವಿದ್ದಾಗಲೇ ತಂದೆ ಈತನ ಕ್ಯಗೆ ಎರಡು ಗುನಿ (ಜಬರಿ)ಗಳನ್ನು ಕೊಟ್ಟು ಸ್ಟೀಲ್ ಪಾತ್ರೆ ಇಟ್ಟು ಅದನ್ನು ಬಾರಿಸಲು ಹೇಳಿಕೊಡುತ್ತಿದ್ದರು. ಆತನ ನಿತ್ಯದ ಸಂಗೀತದಾಟ ಇದಾಗಿತ್ತು.ಹೀಗಾಗಿ ತನ್ನ ಮೂರು ವರ್ಷ ವಯಸ್ಸಿನಲ್ಲಿಯೇ ಕರಡಿ ಕಲೆ ರೂಢಿಸಿಕೊಂಡು ಪ್ರದರ್ಶನ ನೀಡಲು ಪ್ರಾರಂಭಿಸಿದ…..
– ಚಂದ್ರಶೇಖರ ಕರಡಿ ಅಭಿನವನ ತಂದೆ ಹಾಗೂ ಜಾನಪದ ಕರಡಿ ಮಜಲು ಕಲಾವಿದ ಮಹಾಲಿಂಗಪುರ.
ಕರಡಿ ಮಜಲು ಬಾಲ ಕಲಾವಿದ ಅಭಿನವಗೆ ಪ್ರಶಸ್ತಿಗಳು ಒಲಿಯುತ್ತಿರುವದು ಈತನ ಕರಡಿ ಕಲಾಕ್ಷೇತ್ರದಲ್ಲಿಯ ಸಾಧನೆ ಮತ್ತು ನೈಪುಣ್ಯತೆಗೆ ಹಿಡಿದ ಕನ್ನಡಿಯಾಗಿದೆ.ನಮ್ಮ ಮನೆತನದ ಕಲೆಯನ್ನು ಮುಂದಿನ ಪೀಳಿಗೆಗಳಿಗೆ ಪರಿಚಯಿಸುತ್ತಾ ದೇಶದ ಕಲಾ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಹಾಗೂ ಮಹಾಲಿಂಗಪುರದ ಕೀರ್ತಿ ಹೆಚ್ಚಿಸುವ ಕೆಲಸ ಮಾಡುತ್ತಿರುವದು ಹೆಮ್ಮೆಯ ಸಂಗತಿ……
– ಗಂಗಪ್ಪ ಕರಡಿ ಅಭಿನವನ ಅಜ್ಜ ಹಾಗೂ ಜಾನಪದ ಕರಡಿ ಮಜಲು ಕಲಾವಿದ ಮಹಾಲಿಂಗಪುರ.


