ದುಶ್ಚಟ ತ್ಯಜಿಸಿ ಶಿಸ್ತಿನ ಜೀವನಶೈಲಿ ಅಳವಡಿಸಿಕೊಳ್ಳಿ: ಶಾಂತಲಿಂಗ ಸ್ವಾಮೀಜಿ

Hasiru Kranti
ದುಶ್ಚಟ ತ್ಯಜಿಸಿ ಶಿಸ್ತಿನ ಜೀವನಶೈಲಿ ಅಳವಡಿಸಿಕೊಳ್ಳಿ: ಶಾಂತಲಿಂಗ ಸ್ವಾಮೀಜಿ
WhatsApp Group Join Now
Telegram Group Join Now
ಹರಪನಹಳ್ಳಿ: ದುಶ್ಚಟಗಳಿಂದ ದೂರವಿದ್ದು, ಶಿಸ್ತಿನ ಜೀವನಶೈಲಿ ರೂಢಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಅರಸೀಕೆರೆ ಶ್ರೀ ಕೋಲಶಾಂತೇಶ್ವರ ವಿರಕ್ತಮಠದ ಶ್ರೀ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ಶ್ರೀಕೋಲಶಾಂತೇಶ್ವರ ಜನಕಲ್ಯಾಣ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಶ್ರೀಮಠದ ಆವರಣಲ್ಲಿ ಏರ್ಪಡಿಸಿದ್ದ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
“ಯೋಗದಿಂದ ರೋಗ ದೂರವಾಗುತ್ತದೆ; ಅಂತೆಯೇ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ನಮಗೆ ನೀಡಿದ ಅನೇಕ ಅಂಶಗಳನ್ನು ನಾವಿಂದು ಮರೆತಿದ್ದೇವೆ. ಔಷಧ ರಹಿತವಾಗಿ ನಮ್ಮ ಜೀವನಶೈಲಿ ಮಾರ್ಪಡಿಸಿಕೊಳ್ಳುವ ಮೂಲಕ ಮರೆತ ಅಂಶಗಳನ್ನು ನಮಗೆ ಪ್ರಕೃತಿ ಚಿಕಿತ್ಸಾ ಪದ್ಧತಿ ನೆನಪಿಸುತ್ತಿದೆ. ಈ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ” ಎಂದು ಹೇಳಿದರು.
ಜನನಿ ಆಸ್ಪತ್ರೆ ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಕೊಡುಗೆಯಾಗಿದ್ದು, ಮನೆಬಾಗಿಲಲ್ಲೇ ಇಂಥ ಸೌಲಭ್ಯವನ್ನು ಅಭಿವೃದ್ಧಿಪಡಿಸುವುದು ಸಮಾಜಕ್ಕೆ ವರದಾನ. ಜನಸಾಮಾನ್ಯರು ಇದರ ಸೌಲಭ್ಯ ಪಡೆದು ಆರೋಗ್ಯವಂತ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಮಾತನಾಡಿ ‘ಒಮ್ಮೆ ಆರೋಗ್ಯ ಹದಗೆಟ್ಟರೆ ಸರಿಪಡಿಸಿಕೊಳ್ಳುವುದು ಕಷ್ಟಸಾಧ್ಯ. ಆರೋಗ್ಯಸೇವೆ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದೇ ಜಾಣತನ. ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪ್ರಯೋಜನ ಪಡೆದುಕೊಳ್ಳುವ ಜತೆಗೆ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಪಾಶ್ಚಾತ್ಯರ ಅಂಧಾನುಕರಣೆ ತೊರೆದ ನಮ್ಮ ಆಹಾರಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ರೋಗಗಳಿಂದ ದೂರ ಇರೋಣ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪ್ರಶಾಂತ್ ಪಾಟೀಲ ಸಲಹೆ ಮಾಡಿದರು.
ತಾಲೂಕಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು.
ಈ ಸಂದರ್ಭದಲ್ಲಿ ಡಾ.ಸಹನಾ,ಡಾ.ಯಶಸ್ವಿನಿ,ಡಾ.ನಿಶ್ಚಿತ್,ಆಸ್ಪತ್ರೆಯ ಸಲಹೆಗಾರ ಉದಯ್ ಶಂಕರ್ ಭಟ್,ಪ್ರದೀಪ್,ಕಾಲೇಜು ಪ್ರಚಾರ್ಯ ಸುರೇಶ್,ಬಸವರಾಜ್,ಹಾದಿಮನಿ ರಮೇಶ್,ವಿರೇಶ್ ಇತರರು ಇದ್ದರು.
WhatsApp Group Join Now
Telegram Group Join Now
Share This Article