ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದಲ್ಲಿ ಉಳಿದಿದ್ದ ಪಾಕಿಸ್ತಾನಿಗಳು ದೇಶ ತೊರೆಯಲು ಸೂಚಿಸಲಾಗಿತ್ತು. ಅದರಂತೆ, ಆ ದೇಶದ ನಾಗರಿಕರು ಅಟ್ಟಾರಿ-ವಾಘಾ ಗಡಿಯ ಮೂಲಕ ಸ್ವದೇಶಕ್ಕೆ ವಾಪಸ್ ತೆರಳಿದ್ದಾರೆ. ಇದರಿಂದ ಗುರುವಾರ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ವರದಿಯಾಗಿದೆ.
ಅಟ್ಟಾರಿ-ವಾಘಾ ಗಡಿ ದಾಟುವ ಸ್ಥಳವನ್ನು ಈಗ ಸಂಪೂರ್ಣವಾಗಿ ಮುಚ್ಚಲಾಗಿದೆ. ಎರಡು ದಿನಗಳಿಂದ ಜನರಿಂದ ತುಂಬಿದ್ದ ಗಡಿಯು ಇಂದು (ಗುರುವಾರ) ಖಾಲಿ ಇತ್ತು. ಹೀಗಾಗಿ ಎರಡೂ ದೇಶಗಳ ಸಂಧಿಸುವ ಗಡಿಯನ್ನು ಮುಚ್ಚಲಾಗಿದೆ ಎಂದು ಮೂಲಗಳು ದೃಢಪಡಿಸಿವೆ.
ಗಡಿ ದಾಟಿದವರು ಇಷ್ಟು: ಅಟ್ಟಾರಿ-ವಾಘಾ ಗಡಿಯ ಮೂಲಕ 15 ಭಾರತೀಯ ಸೇರಿ 125 ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ತೊರೆದಿದ್ದಾರೆ. ಕಳೆದ 7 ದಿನಗಳಲ್ಲಿ ಒಟ್ಟು 911 ಪಾಕಿಗಳು ದೇಶ ಬಿಟ್ಟು ತೊಲಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೀರ್ಘಾವಧಿ ಭಾರತದ ವೀಸಾ ಹೊಂದಿದ್ದ 73 ಪಾಕ್ ನಾಗರಿಕರು ಸೇರಿ 152 ಭಾರತೀಯರು ಇದೇ ಗಡಿ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ. ಅಲ್ಪಾವಧಿ ವೀಸಾ ಹೊಂದಿದವರ ಪೈಕಿ ಒಟ್ಟು 1617, ದೀರ್ಘಾವಧಿ ವೀಸಾದ 224 ಜನರು ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.