ಬೆಳಗಾವಿ ೨೪: ಕಿತ್ತೂರು ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯವನ್ನು ಎಲ್ಲ ಇಲಾಖೆಗಳಿಗೆ ಪೂರಕವಾಗಿ ಅಧಿಕಾರಯುತವಾಗಿ ಕಾರ್ಯಮಾಡುವ ಪ್ರತ್ಯೇಕ ಸಚಿವಾಲಯದ ಘೋಷಣೆಯ ಜೊತೆಗೆ ಅಭಿವೃದ್ಧಿಗೆ ಪೂರಕವಾದ ವಿಶೇಷ ಆರ್ಥಿಕ ಅನುದಾನವನ್ನು ನೀಡುವ ನಿರ್ಣಯವನ್ನು ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿಗಳಾದ ಎಸ್. ಸಿದ್ಧರಾಮಯ್ಯನವರು ಕಿತ್ತೂರು ಉತ್ಸವದಲ್ಲಿ ಘೋಷಿಸಿಬೇಕೆಂದು ಉತ್ತರ ಕರ್ನಾಟಕ ವಿಕಾಸದ ವೇದಿಕೆ ಅಧ್ಯಕ್ಷ ಮತ್ತು ಕಾಂಗ್ರೇಸ್ ಮುಖಂಡ ಅಶೋಕ ಪೂಜಾರಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ದಿ. ೨೫ ರಂದು ರಾಜ್ಯದ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯನವರು ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಅವರಿಗೆ ಈಗಾಗಲೇ ಬೆಳಗಾವಿಗೆ ಸರಕಾರಿ ಸಮಾರಂಭಗಳಲ್ಲಿ ಭಾಗಹಿಸಲು ಆಗಮಿಸಿದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಪರ ಇರುವ ಸಂಘಟನೆಗಳೊಂದಿಗೆ ಅವರಿಗೆ ಈ ಕುರಿತು ಮನವಿ ಸಲ್ಲಿಸಿ ಉತ್ತರ ಕರ್ನಾಟಕ ಭಾಗದ ಜನರ ಭಾವನೆಗಳನ್ನು ತಿಳಿಸುವ ಪ್ರಯತ್ನದೊಂದಿಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿರುವ ಆದ್ಯತೆಯನ್ನು ಕಿತ್ತೂರು ಕರ್ನಾಟಕ ವಿಭಾಗಕ್ಕೂ ನೀಡಬೇಕು. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿರುವ ಪ್ರತ್ಯೇಕ ಸಚಿವಾಲಯವನ್ನು ಕಿತ್ತೂರು ಕರ್ನಾಟಕ ಭಾಗಕ್ಕೂ ನೀಡಬೇಕು. ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಘೋಷಿಸಿ ಬೆಳಗಾವಿಯ ಸುವರ್ಣಸೌಧವನ್ನು ರಾಜ್ಯಮಟ್ಟದ ಸಚಿವಾಲಯಗಳೊಂದಿಗೆ ಆಡಳಿತಾತ್ಮಕ ಶಕ್ತಿಕೇಂದ್ರವನ್ನಾಗಿಸಬೇಕೆಂದು ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ.
ಆದರೆ, ಈ ಕುರಿತು ಕಲ್ಯಾಣ ಕರ್ನಾಟಕ ಭಾಗದ ಸಚಿವರುಗಳು, ಶಾಸಕರುಗಳು ಇರುವ ರಾಜಕೀಯ ಬದ್ಧತೆ ನಮ್ಮ ಕಿತ್ತೂರು ಕರ್ನಾಟಕ ಭಾಗದ ಜನಪ್ರತಿನಿಧಿಗಳಿಗೆ ಇರದಿರುವದು ವಿಷಾಧನೀಯವಾಗಿದೆ. ಈಗ ನಡೆಯುತ್ತಿರುವ ಕಿತ್ತೂರು ಉತ್ಸವದಲ್ಲಿ ಭಾಗವಹಿಸುತ್ತಿರುವ ನಮ್ಮ ಭಾಗದ ಸಚಿವರುಗಳು ಮತ್ತು ಶಾಸಕರುಗಳು ಈ ಉತ್ಸವದಲ್ಲಿ ಇದಕ್ಕೆ ಪೂರಕವಾದ ಧ್ವನಿಹಾಕುವುದರ ಜೊತೆಗೆ ಮುಖ್ಯಮಂತ್ರಿಗಳಿಗೆ ಈ ಕುರಿತು ಮನವರಿಕೆ ಮಾಡಿಕೊಟ್ಟು ಕಿತ್ತೂರು ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಮತ್ತು ವಿಶೇಷ ಆರ್ಥಿಕ ಅನುದಾನಕ್ಕೆ ಒತ್ತಾಯಿಸಬೇಕೆಂದು ಅವರಲ್ಲಿಯೂ ಸಹ ಮನವಿಮಾಡಿದ್ದಾರೆ.

