ಎಐಯುಟಿಯುಸಿಗೆ ಸಂಯೋಜನೆಗೊಂಡ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಬಳ್ಳಾರಿ ಜಿಲ್ಲಾ ಸಮಿತಿಯಿಂದ ರಾಜ್ ಕುಮಾರ್ ಉದ್ಯಾನವನದಿಂದ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಮಂತ್ರಿಗಳಿಗೆ ಉದ್ದೇಶಿಸಲಾದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.
ಮುಖ್ಯಮಂತ್ರಿಗಳು ಮಾತು ಕೊಟ್ಟಂತೆ ಎಲ್ಲಾ ಆಶಾಗಳಿಗೆ ರೂ.10,000 ಖಾತ್ರಿ ಮಾಡುವ ಆದೇಶ ನೀಡಬೇಕು, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ, ಬಜೆಟ್ ನಲ್ಲಿ ರೂ.1000 ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿಸಬೇಕು, ಪ್ರತಿ ಆಶಾಗೆ ಜನ ಸಂಖ್ಯೆಯನ್ನು ಹೆಚ್ಚಿಸುವ ಹೆಸರಲ್ಲಿ, ಆಶಾಗಳನ್ನು ಮನೆಗೆ ಕಳುಹಿಸುವ ಆದೇಶವನ್ನು ಹಿಂಪಡೆಯಬೇಕು, ಆಶಾಗಳ ಅವೈಜ್ಙಾನಿಕ ಮೌಲ್ಯಮಾಪನ ಪ್ರಕ್ರಿಯೆ ಹಿಂಪಡೆಯಬೇಕು, ಇನ್ನಿತರ ಬೇಡಿಕೆಗಳಿಗಾಗಿ ಬೃಹತ್ ಪ್ರತಿಭಟನೆ ಸಂಘಟಿಸಲಾಗಿತ್ತು.
*ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡುತ್ತಾ* “ಜನವರಿಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರದ ಸಂದರ್ಭದಲ್ಲಿ ಸಿ.ಎಂ ಅವರು ಸಭೆ ಕರೆದು, ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ರೂ.10,000 ಖಾತ್ರಿ ಮಾಡಲಾಗುವುದು, ಏಪ್ರಿಲ್ ತಿಂಗಳಿನಿಂದ ಜಾರಿ ಮಾಡಲಾಗುವುದು, ಹೆಚ್ಚು ಕೆಲಸ ಮಾಡಿದವರಿಗೆ ಹೆಚ್ಚುವರಿ ಗೌರವ ಧನ ನೀಡಲಾಗುವುದು ಎಂದು ಘೋಷಿಸಿದ್ದರು. ಈ ಸಭೆಯಲ್ಲಿ ಆರೋಗ್ಯ ಸಚಿವರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದಾದ ನಂತರ ಸಿ.ಎಂ ಹಾಗೂ ಸಚಿವರು, ಮಾಧ್ಯಮಗಳ ಮುಂದೆ ಅಧಿಕೃತವಾಗಿ ಘೋಷಣೆ ಮಾಡಿದ್ದರು.ಆದರೆ ಇಲ್ಲಿಯವರೆಗೆ ಈ ಕುರಿತು ಸರ್ಕಾರ ಆದೇಶವನ್ನೇ ಮಾಡಿಲ್ಲ. ಮುಖ್ಯ ಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ” ಎಂದು ಆರೋಪಿಸಿದರು.\
ನಾಗಲಕ್ಷ್ಮಿ ಅವರು ಮಾತನಾಡುತ್ತಾ “ಇದಲ್ಲದೆ ಆಶಾ ಗಳಿಗೆ ಜನಸಂಖ್ಯೆಯನ್ನು ತರ್ಕಬದ್ಧಗೊಳಿಸುವ ಹೆಸರಲ್ಲಿ ಒಂದಿಷ್ಟು ಸಂಖ್ಯೆ ಆಶಾಗಳನ್ನು ಮನೆ ಕಳುಹಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ 10-15 ವರ್ಷಗಳಿಂದ ಹಗಲು ರಾತ್ರಿ ಗರ್ಭಿಣಿಯರ ಹಾಗೂ ಶಿಶುಗಳು ಆರೋಗ್ಯಕ್ಕಾಗಿ, ಸಮಾಜದ ಆರೋಗ್ಯಕ್ಕಾಗಿ ಕಷ್ಟಪಡುತ್ತಿರುವ ಆಶಾಗಳನ್ನು ಅತ್ಯಂತ ಅಗೌರವದಿಂದ ಸರ್ಕಾರ ಕಾಣುತ್ತಿದೆ. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ದುಡಿದ ಆಶಾಗಳನ್ನ ಯಾವುದೇ ಮುಲಾಜಿಲ್ಲದೆ ಸರ್ಕಾರ ಮನೆಗೆ ಕಳುಹಿಸಲು ಹೊರಟಿದೆ. ಸರ್ಕಾರದ ಹಾಗೂ ಆರೋಗ್ಯ ಇಲಾಖೆ ಇಂತಹ ಕ್ರಮಗಳ ವಿರುದ್ಧ ಆಶಾ ಗಳು ಬೃಹತ್ ಸಂಖ್ಯೆಯ ಧ್ವನಿ ಎತ್ತಬೇಕು. ಮುಂದಿನ ದಿನಗಳಲ್ಲಿ ಮತ್ತೆ ಉಗ್ರ ಹೋರಾಟಕ್ಕೆ ತಯಾರಾಬೇಕು” ಎಂದು ಕರೆ ನೀಡಿದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್* ಮಾತನಾಡುತ್ತಾ ” ಆಶಾ ಕಾರ್ಯಕರ್ತೆಯರು ತಮ್ಮ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು. ಒಬ್ಬರೆ ಆಶಾವನ್ನು ಕೆಲಸದಿಂದ ತೆಗೆಯುವುದಕ್ಕೆ ನಾವು ಬಿಡಬಾರದು. ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳಿಸಲು ನಾವು ಸಜ್ಜಾಗೋಣ” ಎಂದು ಕರೆ ನೀಡಿದರು.