ಬಳ್ಳಾರಿ, ಮಾ.12: ತಾಲೂಕಿನ ಕುಡುತಿನಿ ಬಳಿ ಲಕ್ಷ್ಮೀ ಮಿತ್ತಲ್ ಕಂಪನಿ ಉಕ್ಕು ಕಾರ್ಖಾನೆ ಸ್ಥಾಪಿಸಲೆಂದು ವಶಪಡಿಸಿಕೊಂಡ ಭೂಮಿಯನ್ನು ಜಿಂದಾಲ್ ಗೆ 200 ಎಕರೆ ಪರಭಾರೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟಬೆ ನಡೆಸುತ್ತಿದ್ದ ಭೂ ಸಂತಸ್ತ್ರ ಹೋರಾಟ ಸಮಿತಿ, ಪ್ರಾಂತ ರೈತ ಸಂಘ, ಸಿಐಟಿಯು, ಕನ್ನಡಪರ ಸಂಘಟನೆ ಗಳು ಜಂಟಿ ಸಮಿತಿಯ ಮುಖಂಡರನ್ನು ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿದ್ದಾರೆ.
ಜಿಂದಾಲ್ ಸಂಸ್ಥೆಯವರು ಪೊಲೀಸ್ ಬಂದೋಬಸ್ತು ನಲ್ಲಿ ಇಂದು ಇಲ್ಲಿ ಮಣ್ಣು ಪರೀಕ್ಷೆಗೆ ಬರಲಿದ್ದಾರೆಂದು ಅದನ್ನು ವಿರೋಧಿಸಿ ಕೈಗಾರಿಕಾ ಪ್ರದೇಶದಲ್ಲಿ ನಿನ್ನೆ ಸಂಜೆಯಿಂದಲೇ ಪ್ರತಿಭಟನೆ ನಡೆದಿತ್ತು. ರಾತ್ರಿಯೂ ರೈತರು ಅಲ್ಲಿಯೇ ಇದ್ದರು. ಬೆಳಗಾಗುವುದರಲ್ಲಿ ನೂರಾರು ರೈತರು ಜಮಾಯಿಸಿದ್ದರು.
ಪ್ರತಿಭಟನೆ ಮಾಡಿ, ಆದರೆ ಇತರೇ ಕಾರ್ಯಗಳಿಗೆ ಅಡ್ಡಿ ಪಡಿಸುವಂತಿಲ್ಲ ಎಂದು ಪೊಲೀಸರು ಮನವಿ ಮಾಡಿದ್ದರು. ಆದರೆ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೆ ಜಿಂದಾಲ್ ನವರು ಇಲ್ಲಿ ಕೈಗಾರಿಕೆ ಸ್ಥಾಪಿಸಲು ಮಣ್ಣು ಪರೀಕ್ಷೆ ಮಾಡಲು ಅವಕಾಶ ನೀಡಲ್ಲ ಎಂದಿದ್ದಕ್ಕೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಳ್ಳಾರಿ ಡಿಎಆರ್ ಗ್ರೌಂಡ್ ಗೆ ಕರೆತಂದರು.


