ಬೆಂಗಳೂರು: ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಸೂಚಿಸಿದ್ದ ಆರೋಪದ ಮೇಲೆ 6 ತಿಂಗಳು ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿದ್ದ ನಿರ್ಣಯ ಹಿಂಪಡೆದಿರುವುದನ್ನು ವಿಧಾನಸಭೆಯಲ್ಲಿ ಇಂದು ಸ್ಥಿರೀಕರಿಸಲಾಯಿತು.
ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ಸ್ಥಿರೀಕರಣ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿ ಬಿಜೆಪಿ ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮುನಿರತ್ನ, ಬೈರತಿ ಬಸವರಾಜ್, ಎಸ್.ಆರ್.ವಿಶ್ವನಾಥ್, ದೊಡ್ಡನಗೌಡ ಪಾಟೀಲ್, ಚನ್ನಬಸಪ್ಪ, ಉಮಾನಾಥ್ ಕೋಟ್ಯಾನ್, ಎಂ.ಆರ್.ಪಾಟೀಲ್, ಡಾ.ಭರತ್ ಶೆಟ್ಟಿ, ಬಿ.ಪಿ.ಹರೀಶ್, ದೀರಜ್ ಮುನಿರಾಜು, ಡಾ.ಚಂದ್ರುಲಮಾಣಿ, ಶರಣು ಸಲಗಾರ್, ಬಸವರಾಜ್ ಮತ್ತಿಮೋಡ್ ಸೇರಿದಂತೆ 18 ಶಾಸಕರನ್ನು ಅಮಾನತು ಮಾಡಲಾಗಿತ್ತು ಎಂದರು.
ಬಿಜೆಪಿ 18 ಶಾಸಕರನ್ನು ಆರು ತಿಂಗಳ ಅಮಾನತು ಮಾಡಲಾಗಿತ್ತು. ಅಮಾನತುಗೊಳಿಸಿದ ನಿರ್ಣಯವನ್ನು ಮೇ 25 ರಿಂದ ಜಾರಿಗೆ ಬರುವಂತೆ ಹಿಂಪಡೆಯಾಗಿದೆ. ಈ ಸ್ಥಿರೀಕರಣ ಪ್ರಸ್ತಾವಕ್ಕೆ ಸದನ ಅನುಮೋದನೆ ನೀಡಬೇಕು ಎಂದು ಕೋರಿದರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಪ್ರಸ್ತಾವವನ್ನು ಮತಕ್ಕೆ ಹಾಕಿದಾಗ, ಧ್ವನಿಮತದ ಮೂಲಕ ಅನುಮೋದನೆ ಪಡೆಯಲಾಯಿತು.