ಬಳ್ಳಾರಿ,ಅ.31:: ಜಿಲ್ಲೆಯ ಮುಂಡರಗಿ ಗ್ರಾಮದ ಬಿಸಿಯೂಟ ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ
, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಂಯೋಜಿತ ಬಳ್ಳಾರಿ ತಾಲ್ಲೂಕು ಸಮಿತಿಯಿಂದ ಜಿಲ್ಲಾ ಪಂಚಾಯಿತಿ ಸಿಇಓ ಎಂ.ಡಿ.ಹ್ಯಾರೀಸ್ ಸುಮೈರ್ ಅವರಿಗೆ ಮನವಿ ಸಲ್ಲಿಸಿತು.
ಇಡೀ ರಾಜ್ಯದಾದ್ಯಂತ ಸರ್ಕಾರಿ ಮತ್ತು ಅನುದಾನಿತ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಅಪೌಷ್ಟಿಕತೆಯನ್ನು ನೀಗಿಸಲು ಬಿಸಿಯೂಟ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಕಳೆದ ೨೨ ವರ್ಷ ಗಳಿಂದ  ಬೆನ್ನೆಲುಬಾಗಿರುವವರು ಬಿಸಿಯೂಟ ತಯಾರಕರು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಎಲ್ಲಾ ಮಕ್ಕಳಿಗೆ ಅಡಿಗೆ ಮಾಡಿ ಬಡಿಸುವುದು, ಹಾಲು ಕಾಯಿಸಿ ನೀಡುವುದು, ಮೊಟ್ಟೆ, ಬಾಳೆಹಣ್ಣು ಕೊಟ್ಟು ಅತ್ಯಂತ ಜತನದಿಂದ ಕೆಲಸ ರ್ವಹಿಸುತ್ತಿರುವ ಈ ಮಹಿಳೆಯರು ಮಕ್ಕಳ ಪಾಲಿಗೆ ಮಹಾ ತಾಯಂದಿರಾಗಿದ್ದಾರೆ. ರಾಜ್ಯದಾದ್ಯಂತ ಬಿಸಿಯೂಟ ತಯಾರಕರೆಂದು ಹೆಸರುವಾಸಿಯಾಗಿರುವ ಇವರು ಮಾತೃ ಹೃದಯದಿಂದ ಮಕ್ಕಳು ಚೆನ್ನಾಗಿರಲಿ ಎಂದು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
     ಅಡುಗೆಯವರಿಗೆ ಕೆಲಸದ ನಿಯಮಾವಳಿಗಳ ಸ್ಪಷ್ಟ ನಿರ್ದೇಶನಗಳಿದ್ದು, ಶಾಲೆಗಳಲ್ಲಿ ಆಯಾಗಳ ತರಹ ಡಿ ಗ್ರೂಪ್ ನೌಕರರ ತರಹ ದುಡಿಸಿಕೊಳ್ಳಲಾಗುತ್ತಿದೆ.ಇವರಿಗೆ, ಬಿಸಿಯೊಟ ಮಕ್ಕಳಿಗೆ ಬಡಿಸುವುದು, ಊಟ ಮಾಡಿದ ಜಾಗವನ್ನು ಶುಚಿ ಮಾಡುವುದು ಮತ್ತು ಅಡಿಗೆ ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು ಇನ್ನು ಮುಂತಾದ ಸರ್ಕಾರ ನಿರ್ದೇಶಿಸಿದ ಕರ್ತವ್ಯಗಳಿವೆ. ಈ ಕೆಲಸಗಳನ್ನಲ್ಲದೆ ಬೇರೆ ಬೇರೆ ಇವರಿಗಲ್ಲದ ಕೆಲಸಗಳನ್ನು ಶಾಲೆಯಿಂದ ಮಾಡಿಸಿಕೊಳ್ಳಲಾಗುತ್ತಿದೆ. ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸುವುದು, ಶಾಲ ಮೈದಾನಗಳನ್ನು ಸ್ವಚ್ಛಗೊಳಿಸುವುದು ಹಾಗೂ ಹುಲ್ಲು ಮುಂತಾದ ಸಸ್ಯಗಳನ್ನು ತೆಗೆದು ಸ್ವಚ್ಛಗೊಳಿಸಲು ಒತ್ತಾಯ ಹೇರಲಾಗುತ್ತಿದೆ. ಅವರು ಹೇಳಿದ ಕೆಲಸ ಮಾಡದಿದ್ದಲ್ಲಿ ನಿಮಗೆ ಇಷ್ಟವಿಲ್ಲವೆಂದರೆ, ಕಷ್ಟವಾದರೆ ನೀವು ಬರುವುದು ಅಗತ್ಯವಿಲ್ಲ, ನಿಮ್ಮ ಜಾಗದಲ್ಲಿ ಬೇರೆಯವರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಇದಲ್ಲದೆ ಇವರಿಗೆ ಮೊಟ್ಟೆ ಬೇಯಿಸಿ ಸುಲಿದು ಕೊಡುವ ಕೂಲಿ ಒಂದು ಮೊಟ್ಟೆಗೆ ೩೦ ಪೈಸೆಯ ಕೂಲಿಯನ್ನು ಕೊಡುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಮಂಜುಳಾ, ತಾಲ್ಲೂಕು ಕಾರ್ಯದರ್ಶಿ ನಾಗರತ್ನ ಬ್ಯಾಲಿಚಿಂತೆ, ತಾಲ್ಲೂಕು ಸಲಹೆಗಾರ ನಾಗರತ್ನ ಎಸ್.ಜಿ ಸೇರಿದಂತೆ ಮತ್ತಿತರರು ಇದ್ದರು.

 
		 
		 
		
