ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣವು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಕೆಂಪು ಮೆಣಸಿನಕಾಯಿ ವ್ಯಾಪಾರದ ಪ್ರಮುಖ ಕೇಂದ್ರವಾಗಿದ್ದು, ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಯುವ ವಾಣಿಜ್ಯ ಕೇಂದ್ರವಾಗಿದೆ. ದೇಶದ ವಿವಿಧ ರಾಜ್ಯಗಳಿಂದ ರೈತರು, ವ್ಯಾಪಾರಿಗಳು, ಉದ್ಯಮಿಗಳು ಹಾಗೂ ವ್ಯಾಪಾರ ವಲಯದವರು ಬ್ಯಾಡಗಿಗೆ ನಿರಂತರವಾಗಿ ಪ್ರಯಾಣಿಸುತ್ತಿರುತ್ತಾರೆ.
ಆದರೆ ಪ್ರಸ್ತುತ ಬ್ಯಾಡಗಿ ರೈಲು ನಿಲ್ದಾಣದಲ್ಲಿ ಹಲವು ಪ್ರಮುಖ ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆ ವ್ಯವಸ್ಥೆ ಇಲ್ಲದಿರುವುದರಿಂದ ಸ್ಥಳೀಯ ನಿವಾಸಿಗಳು ಮಾತ್ರವಲ್ಲದೆ ರೈತರು,ವ್ಯಾಪಾರಿಗಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಸಣ್ಣ ಮಕ್ಕಳೊಂದಿಗೆ ಪ್ರಯಾಣಿಸುವ ಕುಟುಂಬಗಳು ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ. ಸಮೀಪದ ಹಾವೇರಿ ಮೊದಲಾದ ನಿಲ್ದಾಣಗಳಲ್ಲಿ ಇಳಿದು ಅಲ್ಲಿಂದ ಬ್ಯಾಡಗಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಸಾರ್ವಜನಿಕರಿಗೆ ಬಹಳ ತೊಂದರೆಯನ್ನುಂಟು ಮಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಿ.ಕೆ.ಆದಪ್ಪಗೌಡರ ಅವರ ನೇತೃತ್ವದಲ್ಲಿ, ಉಪಾಧ್ಯಕ್ಷರಾದ ಶ್ರೀ ಸಿದ್ದೇಶ್ವರ ಕಮ್ಮಾರ ಹಾಗೂ ಜೊತೆ ಗೌರವ ಕಾರ್ಯದರ್ಶಿ ಶ್ರೀ ಪ್ರಕಾಶ ಶೃಂಗೇರಿ ಅವರು ನೈರುತ್ಯ ರೈಲ್ವೆ ವಲಯದ ಮಹಾಪ್ರಬಂಧಕರಾದ ಶ್ರೀ ಮುಕುಲ್ ಸರನ್ ಮಾಥೂರ ಇವರಿಗೆ ಬ್ಯಾಡಗಿ ರೈಲು ನಿಲ್ದಾಣದಲ್ಲಿ ಯಶವಂತಪುರವಾಸ್ಕೋ ಡಾ ಗಾಮಾ ಎಕ್ಸ್ಪ್ರೆಸ್ ಹಾಗೂ ಹುಬ್ಬಳ್ಳಿ ಬೆಂಗಳೂರು ನ್ಯೂ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳಿಗೆ ಶಾಶ್ವತ ನಿಲುಗಡೆ ಒದಗಿಸಬೇಕೆಂದು ಕೋರಲಾಗಿದೆ:
ಮೇಲ್ಕಂಡ ರೈಲುಗಳಿಗೆ ಬ್ಯಾಡಗಿಯಲ್ಲಿ ನಿಲುಗಡೆ ನೀಡಿದಲ್ಲಿ ವ್ಯಾಪಾರ, ಕೃಷಿ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಮಹತ್ವದ ಉತ್ತೇಜನ ದೊರೆಯಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಈ ಬೇಡಿಕೆಯನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಸಂಸ್ಥೆ ಮನವಿ ಮಾಡಿದ್ದಕ್ಕೆ , ಶೀಘ್ರದಲ್ಲೇ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿರುವರು.
ಸಂಪಾದಕರು
ಮಾನ್ಯರೇ,
[ಈ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ.
ವಂದನೆಗಳೊಂದಿಗೆ
ಉದಯ ರೇವಣಕರ
ಗೌರವ ಕಾರ್ಯದರ್ಶಿ


