ಬಳ್ಳಾರಿ: 16..ಉತ್ತರ ಕರ್ನಾಟಕದ ರೈಲು ಸಂಪರ್ಕವನ್ನು ವಿಸ್ತರಿಸುವ ಹಾಗೂ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ನಿಯೋಗವು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಸದಸ್ಯರಾದ ಬಸವರಾಜ್ ಬೋಮ್ಮಯಿ ಮತ್ತು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆಯ ರಾಜ್ಯ ಸಚಿವರಾದ ಶೊಭ ಕರಂದ್ಲಜೆ ಅವರನ್ನು ಮಾರ್ಚ್ 11ರಂದು ನವದೆಹಲಿಯಲ್ಲಿ ಭೇಟಿ ಮಾಡಿ ವಿವಿಧ ಪ್ರಮುಖ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿತು.
ಬಳ್ಳಾರಿ, ಸಿರುಗುಪ್ಪ ಹಾಗೂ ಸಿಂಧನೂರು ಭಾಗದ ಜನತೆಗೆ ಬಹು ವರ್ಷಗಳಿಂದ ನಿರೀಕ್ಷೆಯಲ್ಲಿರುವ ಬಳ್ಳಾರಿ–ಸಿರುಗುಪ್ಪ–ಸಿಂಧನೂರು ನೂತನ ರೈಲು ಮಾರ್ಗವನ್ನು ತಕ್ಷಣ ಪ್ರಾರಂಭಿಸಬೇಕೆಂದು ನಿಯೋಗವು ಮನವಿ ಮಾಡಿತು. ಈ ರೈಲು ಮಾರ್ಗ ಆರಂಭವಾದರೆ ಉತ್ತರ ಕರ್ನಾಟಕದ ಅನೇಕ ಗ್ರಾಮೀಣ ಪ್ರದೇಶಗಳಿಗೆ ರೈಲು ಸಂಪರ್ಕ ದೊರೆಯುವ ಜೊತೆಗೆ ಕೃಷಿ, ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ದೊಡ್ಡ ಉತ್ತೇಜನ ದೊರೆಯಲಿದೆ ಎಂದು ನಿಯೋಗ ಸದಸ್ಯರು ವಿವರಿಸಿದರು.
ಇದಕ್ಕೆ ಜೊತೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿ ಬರಲು ಪ್ರತಿದಿನವೂ ವೇಗವಾದ ಮತ್ತು ಸುಗಮವಾದ ರೈಲು ಸೇವೆ ಅಗತ್ಯವಿರುವುದರಿಂದ ಜನಶತಾಬ್ದಿ ಅಥವಾ ವಂದೇ ಭಾರತ್ ರೈಲು ಸೇವೆ ಆರಂಭಿಸುವಂತೆ ಮನವಿ ಮಾಡಲಾಯಿತು. ಬಳ್ಳಾರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವ್ಯಾಪಾರಿಗಳು ಬೆಂಗಳೂರಿಗೆ ಪ್ರಯಾಣಿಸಲು ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ನಿಯೋಗ ಅಭಿಪ್ರಾಯಪಟ್ಟಿತು.
ಇದರೊಂದಿಗೆ ವಿವಿಧ ಕಾರಣಗಳಿಂದ ನಿಲುಗಡೆಯಾಗಿರುವ ಕೆಲವು ಪ್ರಮುಖ ರೈಲು ಸೇವೆಗಳನ್ನು ಪುನರಾರಂಭಿಸುವಂತೆ ಕೂಡ ಮನವಿ ಮಾಡಲಾಯಿತು. ವಿಶೇಷವಾಗಿ ಕೊಲ್ಲಾಪುರ–ಹುಬ್ಬಳ್ಳಿ–ಮುನೂಗುರು ರೈಲು ಸೇವೆ ಹಾಗೂ ಶಿವಮೊಗ್ಗ–ಚಿತ್ರದುರ್ಗ–ಬಳ್ಳಾರಿ–ಚೆ ನ್ನೈ ರೈಲು ಸೇವೆಗಳನ್ನು ಮತ್ತೆ ಆರಂಭಿಸುವಂತೆ ನಿಯೋಗ ಒತ್ತಾಯಿಸಿತು. ಈ ರೈಲುಗಳು ಆರಂಭವಾದರೆ ರಾಜ್ಯದ ವಿವಿಧ ಭಾಗಗಳ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ ಎಂದು ಅವರು ವಿವರಿಸಿದರು.
ನಿಯೋಗದ ಮನವಿಯನ್ನು ಗಮನದಿಂದ ಆಲಿಸಿದ ಬಸವರಾಜ್ ಬೊಮ್ಮಯಿ ಮತ್ತು ಶೊಭ ಕರಂದ್ಲಜೆ ಅವರು, ಈ ಬೇಡಿಕೆಗಳ ಬಗ್ಗೆ ಕೇಂದ್ರ ರೈಲ್ವೆ ಸಚಿವಾಲಯದ ಗಮನಕ್ಕೆ ತರಲಾಗುವುದು ಹಾಗೂ ರೈಲ್ವೆ ಸಚಿವರಿಗೆ ಶಿಫಾರಸು ಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು. ಜನರಿಗೆ ಅನುಕೂಲವಾಗುವಂತಹ ಯೋಜನೆಗಳಿಗೆ ತಾವು ಸದಾ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಭೇಟಿಯ ವೇಳೆ ಸುಮಾರು 25 ಸದಸ್ಯರ ನಿಯೋಗ ಭಾಗವಹಿಸಿತ್ತು. ನಿಯೋಗದ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದ ಇಬ್ಬರು ನಾಯಕರು ಡ್ರೈಫ್ರೂಟ್ಸ್ ಹಾಗೂ ಕಾಫಿ ನೀಡಿ ಆತಿಥ್ಯ ವಹಿಸಿ, ಅವರೊಂದಿಗೆ ಸ್ನೇಹಪೂರ್ವಕವಾಗಿ ಮಾತುಕತೆ ನಡೆಸಿದರು. ನಿಯೋಗ ಸದಸ್ಯರು ತಮ್ಮ ಬೇಡಿಕೆಗಳನ್ನು ವಿವರವಾಗಿ ಮಂಡಿಸಿದ ನಂತರ ಮನವಿ ಪತ್ರವನ್ನು ಸ್ವೀಕರಿಸಿದರು.
ಇದಕ್ಕೂ ಮುನ್ನ ಇದೇ ಬೇಡಿಕೆಗಳ ಕುರಿತು ನಿಯೋಗವು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಚರ್ಚಿಸಿ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು. ರಾಜ್ಯದ ಹಲವು ಭಾಗಗಳಲ್ಲಿ ರೈಲು ಸಂಪರ್ಕವನ್ನು ವಿಸ್ತರಿಸುವ ಅಗತ್ಯವಿರುವುದರಿಂದ ಸರ್ಕಾರವು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಸದಸ್ಯರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ನಿಯೋಗವು ಮುಂದಿನ ದಿನಗಳಲ್ಲಿಯೂ ವಿವಿಧ ಜನಪ್ರತಿನಿಧಿಗಳು ಹಾಗೂ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.


