ಬಳ್ಳಾರಿ,ಡಿ.13: ಮಕ್ಕಳು ಸ್ಪರ್ಧೆಗಳಲ್ಲಿ ತೋರಿದ ಆತ್ಮವಿಶ್ವಾಸ ಹಾಗೂ ಸೃಜನಶೀಲತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅವರಿಗೆ ದೊರೆತ ಪ್ರತಿಯೊಂದು ಗೆಲುವು ನಮ್ಮ ಸಂಸ್ಥೆಯ ಮೌಲ್ಯಗಳು ಮತ್ತು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಫಲವೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಪಿ.ಎನ್. ಸುರೇಶ್ ತಿಳಿಸಿದ್ದಾರೆ.
ಇಂದಿರಾನಗರ ಕ್ಲಸ್ಟರ್ ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿ 2025-26 ರಲ್ಲಿ ಶ್ರೀ ವಾಸವಿ ವಿದ್ಯಾಲಯದ ವಿದ್ಯಾರ್ಥಿಗಳು ಸಾಂಸ್ಕೃತಿಕ, ಸಾಹಿತ್ಯ, ಕಲಾ, ಪ್ರಬಂಧ, ಸಂಸ್ಕೃತ ಮತ್ತು ಅರಬೀಕ್ ಧಾರ್ಮಿಕ ಪಠಣ, ಚಿತ್ರಕಲೆ, ಕಂಠಪಾಠ,ಆಶುಭಾಷಣ, ಕ್ಲೆಮಾಡಲ್, ರಂಗೋಲಿ,ಭರತನಾಟ್ಯ, ಕವಾಲಿ ಮತ್ತು ಇತರೆ ಹಲವು ವಿಭಾಗಗಳಲ್ಲಿ ವಿದ್ಯಾರ್ಥಿಗಳು 30 ಪ್ರಶಸ್ತಿಗಳನ್ನು ಗಳಿಸುವುದರ ಮೂಲಕ ಅದ್ಭುತ ಸಾಧನೆ ಪ್ರದರ್ಶಿಸಿದ್ದಾರೆ.
ಪ್ರತಿ ಸ್ಪರ್ಧೆಯಲ್ಲಿ ಮಕ್ಕಳ ಆಸಕ್ತಿ, ಸೃಜನಶೀಲತೆ ಮತ್ತು ಪರಿಶ್ರಮವು ಸಂಸ್ಥೆಯ ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರ ನಿಷ್ಠೆಯ ಪ್ರತಿಫಲವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಹುಮಾನಗಳನ್ನು ಪಡೆಯುವ ಮೂಲಕ ನಮ್ಮ ಶಾಲೆ ಕ್ಲಸ್ಟರ್ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ನಮ್ಮ ವಿದ್ಯಾರ್ಥಿಗಳ ಸಾಧನೆ ಶಾಲೆಯ ಹೆಸರು,ಖ್ಯಾತಿ ಮತ್ತು ಪ್ರತಿಷ್ಠೆಯನ್ನು ಮತ್ತಷ್ಟು ಎತ್ತಿ ಹಿಡಿದಿದೆ ಎಂದು ಶಾಲಾ ಮುಖ್ಯಗುರುಗಳಾದ ವೀರೇಶ್. ಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದು,ಮಕ್ಕಳು ಭವಿಷ್ಯದಲ್ಲಿ ಮತ್ತಷ್ಟು ಯಶಸ್ಸು ಪಡೆಯಲಿ ಎಂದು ಶುಭ ಹಾರೈಸಿದರು.


