ಅಂಬಾಲ (ಹರಿಯಾಣ) : ಆಪರೇಷನ್ ಸಿಂಧೂರ್ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ. ಗುರುವಾರ, ಪಾಕಿಸ್ತಾನವು ಡ್ರೋನ್ಗಳು ಮತ್ತು ಕ್ಷಿಪಣಿಗಳೊಂದಿಗೆ ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು. ಆದರೆ ಭಾರತವು S-400 ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಈ ದಾಳಿಗಳನ್ನು ವಿಫಲಗೊಳಿಸಿದೆ. ಇದರ ನಂತರ, ಗಡಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ಮಂದುವರೆದ ಭಾಗವಾಗಿ, ಪಂಜಾಬ್ – ಹರಿಯಾಣ ಮತ್ತು ಚಂಡೀಗಢದಲ್ಲಿಯೂ ಎಚ್ಚರಿಕೆ ನೀಡಲಾಗಿದೆ.
ಅಂಬಾಲದಲ್ಲಿ ಸೈರನ್ ಎಚ್ಚರಿಕೆ: ಶುಕ್ರವಾರ ಬೆಳಗ್ಗೆ, ವಾಯುಪಡೆಯು ಚಂಡೀಗಢ ಮತ್ತು ಹರಿಯಾಣದ ಅಂಬಾಲದಲ್ಲಿ ಸಂಭಾವ್ಯ ಡ್ರೋನ್ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದೆ. ಅದರ ನಂತರ ಸೈರನ್ ಮೊಳಗಿಸಲಾಗಿದೆ. ಈ ಸಮಯದಲ್ಲಿ ಜನರು ಮನೆಯಲ್ಲಿಯೇ ಇರಬೇಕೆಂದು ಮನವಿ ಮಾಡಲಾಗಿತ್ತು.
”ಜನರು ತಮ್ಮ ಮನೆಗಳಲ್ಲಿಯೇ ಇರಬೇಕು. ಉದ್ಯಾನವನದಲ್ಲಿ ಅಥವಾ ಬೀದಿಯಲ್ಲಿ ಯಾರೂ ನಿಲ್ಲಬಾರದು. ಇದನ್ನು ಹೊರತುಪಡಿಸಿ, ಮನೆಯ ಬಾಲ್ಕನಿ ಅಥವಾ ಟೆರೇಸ್ನಲ್ಲಿ ಯಾರೂ ನಿಲ್ಲಬಾರದು. ಯಾರೊಬ್ಬರ ಮನೆ ದೂರದಲ್ಲಿದ್ದರೆ, ಅವರು ಹತ್ತಿರದ ಕಟ್ಟಡಕ್ಕೆ ಹೋಗಬೇಕು” ಎಂದು ಇಲ್ಲಿನ ಸರ್ಕಾರ ಹೇಳಿದೆ.
ಜನರು ಮನೆಯೊಳಗೆ ಇರುವಂತೆ ಮನವಿ : ಸುಮಾರು ಅರ್ಧ ಗಂಟೆಯ ನಂತರ, ವಾಯುಪಡೆಯು ಯಾವುದೇ ವಾಯುದಾಳಿ ಎಚ್ಚರಿಕೆ ಇಲ್ಲ ಎಂದು ತಿಳಿಸಿದೆ. ಆದರೆ ಜನರು ಮನೆಯೊಳಗೆ ಇರುವಂತೆ ಮನವಿ ಮಾಡಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಂಬಾಲ ಆಡಳಿತವು ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ನಿರ್ಧರಿಸಿದೆ. ಅಂಬಾಲಾದಲ್ಲಿ ಮೇ 10 ರವರೆಗೆ ಶಿಕ್ಷಣ ಸಂಸ್ಥೆಗಳು ಬಂದ್ ಆಗಿರಲಿವೆ.
ಇಂದು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಿದ್ಯುತ್ ಕಡಿತ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಇಂದು ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಅಂಬಾಲದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಈ ಸಮಯದಲ್ಲಿ ನಗರದ ಲೈಟ್ಗಳನ್ನು ಆಫ್ ಮಾಡಲಾಗುತ್ತದೆ. ಆದ್ದರಿಂದ, ಜನರು ತಮ್ಮ ಪ್ರಮುಖ ಕೆಲಸವನ್ನು ಹಗಲಿನಲ್ಲಿಯೇ ಪೂರ್ಣಗೊಳಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ನಿಮ್ಮ ಫೋನ್ ಚಾರ್ಜ್ ಆಗಿರಲಿ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಸೈರನ್ ಸದ್ದು ಮಾಡಿದ ತಕ್ಷಣ ನಿಮ್ಮ ಮನೆಯೊಳಗೆ ಹೋಗಿ ಎಂದು ತಿಳಿಸಿದೆ.