ಇಂದಿನಿಂದ ರಾಜ್ಯ ವಿಧಾನಮಂಡಲ ಮುಂಗಾರು ಅಧಿವೇಶನ: ಹಾಜರಾತಿ ಗುರುತಿಸಲು ಎಐ ತಂತ್ರಜ್ಞಾನ!

Ravi Talawar
ಇಂದಿನಿಂದ ರಾಜ್ಯ ವಿಧಾನಮಂಡಲ ಮುಂಗಾರು ಅಧಿವೇಶನ: ಹಾಜರಾತಿ ಗುರುತಿಸಲು ಎಐ ತಂತ್ರಜ್ಞಾನ!
WhatsApp Group Join Now
Telegram Group Join Now

ಬೆಂಗಳೂರು: ಇಂದಿನಿಂದ ರಾಜ್ಯ ವಿಧಾನಮಂಡಲ ಮುಂಗಾರು ಅಧಿವೇಶನವು ನಡೆಯಲಿದೆ. ”ಕಲಾಪದಲ್ಲಿ ಶಾಸಕರ ಹಾಜರಾತಿಯನ್ನು ಗುರುತಿಸಲು ಎಐ ಆಧಾರಿತ ಕ್ಯಾಮರಾ ಬಳಸಲಾಗುತ್ತಿದೆ” ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ವಿಧಾನಮಂಡಲ ಅಧಿವೇಶನ ಆರಂಭದ ಹಿನ್ನೆಲೆಯಲ್ಲಿ ಭಾನುವಾರ ಪೂರ್ವ ಸಿದ್ಧತೆ ಪರಿಶೀಲಿಸಿದ ಸ್ಪೀಕರ್ ಮಾತನಾಡಿ, ಸದನಕ್ಕೆ ಯಾರು ಬೇಗ ಬರುತ್ತಾರೆ. ಕಲಾಪ ಮುಗಿಯುವ ಕೊನೆಯವರೆಗೆ ಯಾರು ಇರುತ್ತಾರೆ ಎಂಬ ಬಗ್ಗೆ ಗುರುತಿಸಲು ಎಐ ಟೆಕ್ನಾಲಜಿ ಬಳಸಲಾಗುತ್ತಿದೆ. ಶಾಸಕರು ಎಷ್ಟು ಗಂಟೆಗೆ ಬರ್ತಾರೆ, ಹೋಗ್ತಾರೆ ಎಂಬ ವಿವರಗಳನ್ನು ಎಐ ಆಧಾರಿತ ಕ್ಯಾಮರಾ ಸೆರೆ ಹಿಡಿಯಲಿದೆ” ಎಂದರು.

”ಶಾಸಕರು ಕ್ಷೇತ್ರದ ಬಗ್ಗೆ ಚರ್ಚೆ ಮಾಡಬೇಕು. 10 ದಿನಗಳ ಕಾಲ ಅಧಿವೇಶನ ನಡೆಯುತ್ತದೆ. ಇದರ ಸದುಪಯೋಗ ಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದ ಅವರು, ವಿಪಕ್ಷಗಳಿಂದ ವಿಧಾನಸೌಧಕ್ಕೆ ಮುತ್ತಿಗೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ”ಇಷ್ಟು ಸಮಯ ಇತ್ತಲ್ಲಾ ಮುತ್ತಿಗೆ ಹಾಕಬೇಕಿತ್ತು, ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಅಧಿವೇಶನದಲ್ಲಿ ಸಮಯವನ್ನು ಕುಂಠಿತ ಮಾಡಬಾರದು. ಅಧಿವೇಶನ ಆದಮೇಲೆ ಮುತ್ತಿಗೆ ಹಾಕಬಹುದು” ಎಂದು ಮನವಿ ಮಾಡಿದರು.

”ಸಿಕ್ಕಿರುವ ಸಮಯವಕಾಶವನ್ನು ಕ್ಷೇತ್ರದ ಸಮಸ್ಯೆ ಮನವಿಗಳ ಬಗ್ಗೆ ಮಾತಾಡಲಿ. ಅಧಿವೇಶನದಲ್ಲಿ ಸಮಸ್ಯೆಗಳ ಚರ್ಚೆ ಆಗಬೇಕು. ಪ್ರತಿಪಕ್ಷಗಳಿಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ. ನಾನು ಅವರ ಮಿತ್ರ. ರಾಜ್ಯದ, ದೇಶದ ಹಿತಕ್ಕೋಸ್ಕರ ವಿಪಕ್ಷಗಳು ಅಧಿವೇಶನದ ಸದುಪಯೋಗ ಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದರು.

ಕೆಂಗಲ್ ಗೇಟ್ ದ್ವಾರಕ್ಕೆ ಹೊಸ ಮೆರಗು: ವಿಧಾನಸೌಧದ ಕೆಂಗಲ್ ಗೇಟ್​​​ಗೆ ಹೊಸ ಮೆರುಗು ನೀಡಲಾಗಿದೆ. ಮರದ ಕೆತ್ತನೆಗಳ ದ್ವಾರ ಅಳವಡಿಕೆ ಮಾಡಲಾಗಿದ್ದು, ಶಾಸಕರು ಪ್ರವೇಶಿಸುವ ವಿಧಾನಸಭಾ ಸಂಭಾಗಣದ ದ್ವಾರಕ್ಕೆ ಹೊಸ ರೂಪ ನೀಡಲಾಗಿದೆ.

ಕೆಂಗಲ್ ಗೇಟ್ ಬಳಿ ಮೆಟ್ಟಿಲುಗಳಿಗೆ ರೆಡ್ ಕಾರ್ಪೆಟ್ ಹಾಸಲಾಗಿದೆ. ದ್ವಾರದಲ್ಲಿ ರಾಜ್ಯದ ಲಾಂಛನ ಗಂಡಭೇರುಂಡ ಜೊತೆಗೆ ಕ್ಲಾಕ್ ಅಳವಡಿಸಿ ವಿಶೇಷ ಮೆರುಗು ನೀಡಲಾಗಿದೆ. ಸದನ ಪ್ರಾರಂಭವಾಗುವ ಮುನ್ನ ನೂತನ ದ್ವಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.

ಹೋರಾಟಕ್ಕೆ ಪ್ರತಿಪಕ್ಷಗಳು ಸಜ್ಜು: ಅಧಿವೇಶನದಲ್ಲಿ ಹಗರಣಗಳ ಅಸ್ತ್ರದೊಂದಿಗೆ ಸರ್ಕಾರದ ವಿರುದ್ಧ ಉಭಯ ಸದನಗಳಲ್ಲಿಯೂ ಏಕ ಕಾಲಕ್ಕೆ ಹೋರಾಟ ನಡೆಸಲು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಿದ್ಧಗೊಂಡಿವೆ. ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜುಗೊಂಡಿರುವ ಹಿನ್ನೆಲೆಯಲ್ಲಿ ಕಲಾಪದಲ್ಲಿ ಈ ಬಾರಿ ಗದ್ದಲ, ಗಲಾಟೆ ಏರ್ಪಡಲಿದೆ. ವಾಲ್ಮೀಕಿ ನಿಗಮದ ಹಗರಣ ಮತ್ತು ಮೈಸೂರಿನ ಮುಡಾ ಹಗರಣದ ಆರೋಪಗಳನ್ನು ಉಭಯ ಸದನದಲ್ಲಿಯೂ ಪ್ರಸ್ತಾಪಿಸಿ ಏಕಕಾಲಕ್ಕೆ ಸರ್ಕಾರವನ್ನು ಹಣಿಯಲು ಬಿಜೆಪಿ, ಜೆಡಿಎಸ್ ನಿರ್ಧರಿಸಿವೆ. ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದು, ಇ.ಡಿ ಅಧಿಕಾರಿಗಳಿಂದ ಬಂಧನಕ್ಕೂ ಒಳಗಾಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುವುದು ವಿಪಕ್ಷಗಳ ಬೇಡಿಕೆಯಾಗಿದ್ದು, ಅದನ್ನೇ ಮುಂದಿಟ್ಟು ಸದನದಲ್ಲಿ ಹೋರಾಟ ಮಾಡಲಿವೆ.

WhatsApp Group Join Now
Telegram Group Join Now
Share This Article