ಬೆಂಗಳೂರು, ಜೂನ್ 24: ಕೇಂದ್ರ ಗೃಹ ಸಚಿವ ಅಮಿತ್ ಶಾಬೆಂಗಳೂರಿಗೆ ಭೇಟಿ ನೀಡಿ ಹೋದ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಒಂದೆಡೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿ ದಿನ ರಾಜ್ಯ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿಕೊಡುತ್ತಿದ್ದರೆ, ಅತ್ತ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ಕುಟುಂಬದ ಪ್ರಾಬಲ್ಯದ ವಿರುದ್ಧ ಒಂದು ವರ್ಗದ ನಾಯಕರು ತಿರುಗಿಬಿದ್ದಿದ್ದಾರೆ. ಬೆಂಗಳೂರಿನ ಬಂಡಾಯ ಸಭೆಗಳಿಂದ ಹಿಡಿದು ವಿಜಯಪುರದ ತೀಕ್ಷ್ಣ ಹೇಳಿಕೆಗಳವರೆಗೆ, ಬಿಜೆಪಿ ನಾಯಕತ್ವ ಬದಲಾವಣೆಗೆ ಮತ್ತೆ ಕರೆ ಜೋರಾಗುತ್ತಿದೆ.
ಯತ್ನಾಳ್ ಉಚ್ಚಾಟನೆಯೊಂದಿಗೆ ರಾಜ್ಯ ಬಿಜೆಪಿಯಲ್ಲಿ ತಣ್ಣಗಾಗಿದ್ದ ವಿಜಯೇಂದ್ರ ವಿರೋಧಿ ಬಣದ ಚಟುವಟಿಕೆಗಳು ಮತ್ತೆ ಶುರುವಾಗಿವೆ. ಕೇಂದ್ರ ಸಚಿವ ವಿ. ಸೋಮಣ್ಣ ಕೆಲವೇ ದಿನಗಳ ಹಿಂದೆ ವಿಜಯೇಂದ್ರ ವಿರೋಧಿ ಬಣದ ನಾಯಕರೊಂದಿಗೆ ಸಭೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನಲ್ಲಿ ನಡೆದ ಕೇಂದ್ರ ಸಚಿವ ವಿ. ಸೋಮಣ್ಣ ನೇತೃತ್ವದ ಬಂಡಾಯ ಬಿಜೆಪಿ ನಾಯಕರ ಸಭೆಯೊಂದಿಗೆ ಮತ್ತೆ ಭಿನ್ನಮತ ಚುರುಕುಪಡೆದಿದೆ. ವಿಜಯೇಂದ್ರರ ಕಡು ವಿರೋಧಿಯಾಗಿರುವ ಕುಮಾರ್ ಬಂಗಾರಪ್ಪ, ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಒತ್ತಾಯವನ್ನು ಪುನರುಚ್ಚರಿಸಿದ್ದಾರೆ. ನಾವು ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯಬಾರದು ಎಂಬ ಹೋರಾಟ ಮುಂದುವರೆಸಲಿದ್ದೇವೆ. ಬದಲಾವಣೆಯಾಗದಿದ್ದರೆ, ಪಕ್ಷಕ್ಕೆ ಗಂಭೀರ ಸಂಕಷ್ಟ ಬರಲಿದೆ. ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.
ವಿಜಯೇಂದ್ರ ವಿರುದ್ದ ವಾಗ್ದಾಳಿ ಮುಂದುವರಿಸಿರುವ ಕುಮಾರ್ ಬಂಗಾರಪ್ಪ, ಪಕ್ಷದ ಕಾರ್ಯಕರ್ತರು ವ್ಯವಸ್ಥಿತ ಬದಲಾವಣೆಯನ್ನು ಬಯಸುತ್ತಾರೆ. ವಿಜಯೇಂದ್ರ ಜನರ ಭಾವನೆಗೆ ತಕ್ಕಂತೆ ಪಕ್ಷವನ್ನು ಹೋರಾಟಕ್ಕೆ ಕರೆದೊಯ್ಯಲು ವಿಫಲರಾಗಿದ್ದಾರೆ. ವಿಜಯೇಂದ್ರ ಜನರ ಭಾವನೆಯಂತೆ ನೇರವಾಗಿ ಹೋರಾಟ ಮಾಡುತ್ತಿಲ್ಲ. ಪಕ್ಷ ಜನರ ಭಾವನೆಯನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.