ಬಳ್ಳಾರಿ:ಮಾ.21..- ಪರಿಶಿಷ್ಟ ಜಾತಿಯಲ್ಲಿ ಜಾರಿಗೆ ತಂದಿರುವ ಒಳ ಮೀಸಲಾತಿಯಲ್ಲಿ ಹಲವು ದೋಷಗಳಿದ್ದು ಸಿ.ಕೆಟಗೆರಿಯ ಕೊರಚ-ಕೊರಮ, ಲಂಬಾಣಿ, ಭೋವಿ ಸಮಾಜಗಳನ್ನು ಒಳಗೊಂಡ 65 ಜಾತಿಗಳಿಗೆ ತೀವ್ರ ಅನ್ಯಾಯವಾಗುತ್ತಿದೆ ಒಳಮೀಸಲಾತಿ ರದ್ದುಮಾಡಿ ಈ ಹಿಂದಿನ ಮೀಸಲಾತಿಯಂತೆ ನೇಮಕಾತಿ ಮಾಡಬೇಕೆಂದು ಕರ್ನಾಟಕ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಎಂ ಟಿ ಮಲ್ಲೇಶಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಎ.ಬಿ.ಸಿ ವರ್ಗೀಕರಣದಲ್ಲಿ ನಡೆಯುವ ನೇಮಕಾತಿಯಿಂದ ನಮ್ಮ ಸಮಾಜಕ್ಕೆ ಅನ್ಯಾಯವಾಗುತ್ತದೆ, ಉದಾಹರಣೆಗೆ ಇತ್ತೀಚೆಗೆ ಧಾರವಾಡ ವಿ ವಿ. ಅರೋಗ್ಯ ವಿಶ್ವವಿದ್ಯಾಲಯ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಆರೋಗ್ಯ ಇಲಾಖೆಗಳಲ್ಲಿ ನಡೆಸಲಾದ ನೇಮಕಾತಿಗಳಲ್ಲಿ ಸಿ ಗುಂಪಿಗೆ ಅನ್ಯಾಯ ಆಗಲಿದೆ ಕಾರಣ ಒಳ ಮೀಸಲಾತಿಯನ್ನು ರದ್ದುಗೊಳಿಸಿ ಹಳೇ ಪದ್ದತಿಯ ಮೀಸಲಾತಿಯ ಪೋಸ್ಟರ್ ಪದ್ಧತಿಯಿಂದ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು, ಮತ್ತು
ಒಳ ಮೀಸಲಾತಿಯನ್ನು ಜಾರಿಗೊಳಿಸಲು ರೂಪಿಸಿದ ರೋಸ್ಟರ್ ಕೋಷ್ಟಕ ದೋಷಪೂರ್ಣವಾಗಿದ್ದು, ಅದನ್ನು ರದ್ದು ಮಾಡಿ ಮೂರು ಪ್ರವರ್ಗಗಳಿಗೂ ಸಮಾನವಾಗಿ ನ್ಯಾಯ ಸಿಗುವ ರೀತಿಯಲ್ಲಿ ಪರಿಷ್ಕೃತ ಆದೇಶವನ್ನು ಹೊರಡಿಸಬೇಕು. ಅಲ್ಲಿಯವರೆಗೆ ಎಲ್ಲಾ ಹುದ್ದೆಗಳ ನೇಮಕಾತಿ ಮಾಡಲು ಹಳೆಯ ಮೀಸಲಾತಿಯ ಜಾರಿಗೊಳಿಸಲು ಆಳವಡಿಸಿಕೊಂಡಿದ್ದ ರೊಸ್ಟರ್ ಪದ್ದತಿಯನ್ನೇ ಮುಂದುವರಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಬೋವಿ ಜನಾಂಗದ ಜಿಲ್ಲಾಧ್ಯಕ್ಷ ವಿ ರಾಮಾಂಜನಿ ಮಾತನಾಡಿ, ಕೇಂದ್ರ ಸರ್ಕಾರ ಜನಗಣತಿಯನ್ನು ಪ್ರಾರಂಭ ಮಾಡಿದೆ ಜನಗಣತಿ ಸಂಪೂರ್ಣ ಮುಗಿಯುವವರೆಗೂ ಅವೈಜ್ಞಾನಿಕವಾಗಿ ಮಾಡಿದ ಒಳ ಮೀಸಲಾತಿಯನ್ನು ರದ್ದುಪಡಿಸಿ, ಕೇಂದ್ರ ಜನಗಣತಿ ಅಂಕಿ-ಅಂಶಗಳು ಬಂದ ನಂತರ ಸಂಖ್ಯೆಗನುಗುಣವಾಗಿ ಮೀಸಲಾತಿಯ ವಿಂಗಡಣೆ ಮಾಡಿದರೆ ಪರಿಶಿಷ್ಟ ಜಾತಿಯ ಎಲ್ಲಾ ಜಾತಿಗಳಿಗೆ ನ್ಯಾಯ ದೊರಕಿದಂತಾಗುತ್ತದೆ ಎಂದರು.
ಒಕ್ಕೂಟದ ಕಾರ್ಯದರ್ಶಿ ವಿ ಮಹೇಶ್ ಮಾತನಾಡಿ, ದೇಶವ್ಯಾಪಿ ನಡೆಯಲಿರುವ ಜನಗಣತಿಯ ದತ್ತಾಂಶ ಬರುವವರಿಗೆ ಏಕಪಕ್ಷೀಯ ನಿರ್ಧಾರ ಮಾಡಬಾರದು ರಾಜ್ಯದಲ್ಲಿ ಒಳ ಮೀಸಲಾತಿ ಹಂಚಿಕೆಯ ಪ್ರಕ್ರಿಯೆ ನಡೆಸುವ ಮುನ್ನ ಸಮುದಾಯಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಬೇಕು. ಶೈಕ್ಷಣಿಕ, ವಸತಿ ನಿಲಯ ಪ್ರವೇಶ, ನೇಮಕಾತಿಗೆ ರೋಸ್ಟರ್ ಹಂಚಿಕೆ ಮಾಡಿ ಹೊರಡಿಸಿರುವ ಎಲ್ಲಾ ಆದೇಶಗಳನ್ನು, ಸುತ್ತೋಲೆಗಳನ್ನು ಹಿಂಪಡೆಯಬೇಕು ಈಗಾಗಲೇ ಹೊರಡಿಸಿರುವ ವಿವಿಧ ನೇಮಕಾತಿ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು. ಹಳೆಯ ಜಾತಿ ಪ್ರಮಾಣ ಪತ್ರಗಳನ್ನು ನೇಮಕಾತಿ ಸಂದರ್ಭದಲ್ಲಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಸರ್ಕಾರದ ಗಮನ ಸೆಳೆಯಲು ಮಾ.24 ರಂದು ಕೊರಮ ಕೊರಚ ಲಂಬಾಣಿ ಮತ್ತು ಭೋವಿ ಜನಾಂಗದ ಸುಮಾರು ಮೂರು ಲಕ್ಷ ಜನರು ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಗೋಪಿ ನಾಯಕ್ ತಿಳಿಸಿದರು.
ಪ್ರತಿಭಟನೆಗೆ ಬಳ್ಳಾರಿ ಜಿಲ್ಲಾ ಕೊಲಂಭೋ ಸಮಾಜದಿಂದ 2 ಸಾವಿರಕ್ಕೂ ಹೆಚ್ಚು ಜನ ತೆರಳಲಿದೆಂದು ಒಕ್ಕೂಟದ ಗೌರವ ಅಧ್ಯಕ್ಷ ಡಾ.ಹನುಂಮತಪ್ಪ, ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ
ಅಧ್ಯಕ್ಷ ರಾಮುನಾಯ್ಕ, ದೇವಣ್ಣ, ರಂಗಸ್ವಾಮಿ, ಪ್ರಕಾಶ್, ಹುಲುಗಪ್ಪ, ಸಂತೋಷ್ ಮೊದಲಾದವರು ಇದ್ದರು.


