ಹಸಿರು ಕ್ರಾಂತಿ ವರದಿ; ಜಮಖಂಡಿ. ಮಹಾಮಾನವತಾವಾದಿ, ದಾಸಶ್ರೇಷ್ಠ, ಭಕ್ತ ಕನಕದಾಸರ ಆದರ್ಶವನ್ನು ಪಾಲಿಸುವುದರಿಂದ ಪ್ರತಿಯೊಬ್ಬರು ಜೀವನದಲ್ಲಿ ಆತ್ಮತೃಪ್ತಿಯನ್ನು ಪಡೆಯಬಹುದು ಎಂದು ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.
ಅವರು ಕುಂಬಾರಹಳ್ಳ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಕನಕದಾಸ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ತನುಮನಕೆ ಅಧ್ಯಾತ್ಮ ಸಿಂಚನದ ಪುಳಕವನ್ನು ಗೈದ ಕನಕದಾಸರು ಮನುಕುಲ ಇರುವವರೆಗೂ ಇರುತ್ತಾರೆ. ಅವರು ಎಂದೆಂದಿಗೂ ಬಾಡದ ದಾಸಶ್ರೇಷ್ಠರಾಗಿದ್ದಾರೆ. ಮಕ್ಕಳು ಕನಕದಾಸರ ಏಕಾಗ್ರತೆ, ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು ಎಂದರು. ಸಾಧನೆ ಜಾತಿ ಮತ ಬಡವ ಶ್ರೀಮಂತ ಎಂಬ ಭೇದವಿಲ್ಲ, ಸಾಧನೆಗೆ ಪರಮಾತ್ಮನೇ ಒಲಿಯುತ್ತಾನೆ ಎಂದರು.
ಶಿಕ್ಷಕ ಸಂಗನಬಸವ ಉಟಗಿ ಮಾತನಾಡಿ ಕನಕದಾಸರ ಕೀರ್ತನೆಗಳನ್ನು ಉದಾಹರಿಸುತ್ತಾ ತಾಳುವಿಕೆಗಿಂತ ತಪವೂ ಇಲ್ಲ ಎನ್ನುವಂತೆ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಸಹನೆಯಿಂದ ವಿದ್ಯೆಯನ್ನು ಅರ್ಜಿಸಬೇಕು, ಸಾಧನೆಯ ಮೂಲಕ ಪರಮಾತ್ಮನಿಗೆ ಹತ್ತಿರವಾಗಬೇಕು, ಕುಲಕುಲಕುಲವೆಂದು ಬಡಿದಾಡದಿರಿ,ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಬಲ್ಲಿರಾ? ಎನ್ನುವಂತೆ ಜಾತಿ, ಮತ, ಪಥ, ಪಂಥಗಳನ್ನು ಮೀರಿ ಬೆಳೆಯಬೇಕು. ಆದರೆ ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿಯೇ ಮೇಲುಗೈ ಸಾಧಿಸುತ್ತಿರುವುದು ಶೋಚನೀಯ ಸಂಗತಿ ಎಂದರು.
ಶಿಕ್ಷಕಿ ಸವಿತಾ ಬೆನಕಟ್ಟಿ ಮಾತನಾಡಿದರು. ಶಿಕ್ಷಕಿ ಶಾರದಾ ಮಠ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಸಂಜೀವ ಝಂಬುರೆ , ಎ.ಎಂ.ಮೋಮಿನ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕ ಬಾಹುಬಲಿ ಮುತ್ತೂರ ವಂದಿಸಿದರು.


