ಬೈಲಹೊಂಗಲ: ತಾಲೂಕಿನ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆಯಾಗಿ, ಶಾಸಕ ಮಹಾಂತೇಶ ಕೌಜಲಗಿ ಅವರ ಶಿಫಾರಸು ಮೇರೆಗೆ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಆದೇಶದನ್ವಯ ಬೈಲಹೊಂಗಲ ಮತಕ್ಷೇತ್ರದ ಶಾಲಾ ಸುಧಾರಣಾ ಸಮಿತಿಗೆ ಸರ್ಕಾರದಿಂದ ನಾಮ ನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ಈ ಸಮಿತಿಗೆ ಶಂಕರ ಸಾಗರ, ಶ್ರೀಮತಿ ಸುಜಾತ ಚಿಕ್ಕಮಠ, ಸುರೇಶ ಆನಿಕಿವಿ, ಜಗದೀಶ ತೋಟಗಿ ಮತ್ತು ಹಸನ ಗೊರವನಕೊಳ್ಳ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಈ ನೇಮಕಾತಿ ಮಹತ್ವದ್ದಾಗಿದೆ ಎಂದು ತಿಳಿದುಬಂದಿದೆ.
ನಾಮ ನಿರ್ದೇಶಿತ ಸದಸ್ಯರು ಶನಿವಾರ ಶಾಸಕ ಮಹಾಂತೇಶ ಕೌಜಲಗಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ, ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಹಾಗೂ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸಮಿತಿಯ ಸದಸ್ಯರು ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ ಕ್ಷೇತ್ರದ ಶಿಕ್ಷಣ ಮಟ್ಟವನ್ನು ಇನ್ನಷ್ಟು ಉತ್ತೇಜಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ರವಿ ಹಿರೇಮಠ, ಮುಖ್ಯೋಪಾಧ್ಯಾಯ ಬಸವರಾಜ ವಾಲಿ ಹಾಗೂ ರಾಜಶೇಖರ ಗಣಾಚಾರಿ ಸೇರಿದಂತೆ ಅನೇಕರು ಇದ್ದರು.


