ಗದಗ : ಭಾರತದ ಸಂಸ್ಕೃತಿ ಉಳಿಯಬೇಕಾದರೆ ಬಡತನ, ರೋಗ-ರುಜಿನಗಳು ನಿವಾರಣೆಯಾಗಬೇಕು ಇದಕ್ಕೆ ಮೌಲ್ಯಯುತವಾದ ಶಿಕ್ಷಣ ಅಗತ್ಯವಾಗಿದೆ ಎಂದು ಚಿಕ್ಕಬಳ್ಳಾಪೂರ ಜಿಲ್ಲೆಯ ಮುದ್ದೇನಹಳ್ಳಿ ಪ್ರಶಾಂತಿ ಬಾಲಮಂದಿರದ ಟ್ರಸ್ಟಿಗಳಾದ ಎಂ.ಎಸ್. ಸತ್ಯನಾರಾಯಣ ಅವರು ಹೇಳಿದರು.
ಅವರು ನಗರದ ಗಂಗಾಪುರ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಗೆ ಭೇಟಿ ನೀಡಿ, ಸಮಿತಿಯಿಂದ ಗೌರವ ಸ್ವೀಕರಿಸಿ ಮಾತನಾಡಿ, ಮಕ್ಕಳಿಗೆ ಮೌಲ್ಯಯುತ ಶಿಕ್ಷಣವನ್ನು ಬಾಲ್ಯದಲ್ಲಿ ನೀಡಿದರೆ ಮಾತ್ರ ಅವರು ಬೆಳೆದಂತೆ ಅದರ ಶ್ರೇಷ್ಠತೆ ಅವರಿಗೆ ಅರಿವಾಗುತ್ತದೆ, ಮುಂದೆ ಅವರು ಸಹ ಈ ಸೇವಾ ಜೀವನವನ್ನು ಮುಂದುವರಿಸುತ್ತಾರೆ ಅಂತಹ ಪ್ರತಿಭೆಗಳು ಈ ಶಾಲೆಯಿಂದ ಹೊರಹೊಮ್ಮಲಿ ಈ ನಿಟ್ಟಿನಲ್ಲಿ ಇಲ್ಲಿನ ಶಿಕ್ಷಕಿಯರ ಸೇವಾಕಾರ್ಯವು ಪ್ರಮುಖವಾಗಿದೆ ಎಂದು ಹೇಳಿದ ಅವರು ಪುಟಪರ್ತಿಯ ಸತ್ಯಸಾಯಿ ಭಗವಾನ್ ಬಾಬಾ ಅವರ ನಂತರ ಸದ್ಗುರು ಡಾ. ಮಧುಸೂದನ್ ಸಾಯಿ ಅವರು ನೇತೃತ್ವದಲ್ಲಿ ಮುದ್ದೇನಹಳ್ಳಿ, ಅಳಕೆ ಸೇರಿದಂತೆ ರಾಜ್ಯ, ರಾಷ್ಟ್ರ ಹಾಗೂ ವಿವಿದ ದೇಶಗಳಲ್ಲಿ ಕಳೆದ ೧೨ ವರ್ಷಗಳಿಂದ “ಒಂದು ಜಗತ್ತು ಒಂದು ಕುಟುಂಬ” ಎಂಬ ಉದ್ದೇಶದೊಂದಿಗೆ ಜನರಿಗೆ ಉಚಿತ ಪೌಷ್ಠಿಕತೆ ವಿತರಣೆ, ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ ಸೇರಿದಂತೆ ಸಾಕಷ್ಟು ಜನಪಯೋಗಿ ಸೇವೆಗಳು ನಡೆಯುತ್ತಾ ಬಂದಿವೆ. ಪ್ರಸ್ತುತ ದಿನಗಳಲ್ಲಿ ರಾಜ್ಯದ ಸರಕಾರಿ ಶಾಲೆಯ ಒಂದು ಕೋಟಿ ಜನ ಮಕ್ಕಳಿಗೆ ನ್ಯೂಟ್ರಿಷಿಯನ್ ಪೌಡರದೊಂದಿಗೆ ಹಾಲನ್ನು ಬೆರೆಸಿ ಬೆಳಗಿನ ಉಪಹಾರ ನೀಡಲಾಗುತ್ತದೆ. ಲಕ್ಷಾಂತರ ರೋಗಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ಎಲ್ಲೂ ಸಹ ಬಿಲ್ಲಿನ ಕೌಂಟರ್ ಇರುವುದಿಲ್ಲ, ಸಾವಿರಾರು ವಿದ್ಯಾರ್ಥಿಗಳಿಗೆ ರಾಜ್ಯದ ೧೮ ಜಿಲ್ಲೆಗಳಲ್ಲಿ ಆರನೇ ತರಗತಿಯಿಂದ ಪದವಿ ಸೇರಿದಂತೆ ಮೆಡಿಕಲ್, ಪ್ಯಾರಾಮೆಡಿಕಲ್, ಕೃಷಿ, ಸಂಬಂಧಿಸಿದ ಪದವಿಗಳಿಗೆ ಉಚಿತ ವಸತಿಯೊಂದಿಗೆ ಶಿಕ್ಷಣ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಶಿರಹಟ್ಟಿ ತಾಲ್ಲೂಕ ಮಜ್ಜೂರಿನ ಶ್ರೀ ಸತ್ಯಸಾಯಿ ವಾಣಿ ನಿಕೇತನ ಗುರುಕುಲದ ಚೇರಮನ್ನರಾದ ಬಿ.ಎಸ್. ಗೋಣಿ, ಕಾರ್ಯಾಧ್ಯಕ್ಷರಾದ ಡಾ. ಸೀಮಾ ಮೇಡಂ, ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ, ಪ್ರೋ. ರಾಮಚಂದ್ರ ಜೋಗಿನ, ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ವೆಂಕಟೇಶ ಇಮರಾಪೂರ, ಉಪಾಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ಕೊಪ್ಪದ, ಕಾರ್ಯದರ್ಶಿಗಳಾದ ಕವಿತಾ ಇಮರಾಪೂರ, ನಿರ್ದೇಶಕರಾದ ಮೋಹನ ಇಮರಾಪೂರ, ಮುತ್ತು ಜಡಿ, ಮುಖ್ಯೋಪಾದ್ಯಾಯನಿ ಎಚ್.ಎಂ. ನದಾಫ್, ಸಹ ಶಿಕ್ಷಕಿಯರಾದ ಮಂಜುಳಾ ಹಿಡ್ಕಿಮಠ, ರೇಖಾ ಅಂಗಡಿ, ಸುಧಾ ತಿರಕಣ್ಣವರ, ಶೋಭಾ ಸಂಬರಗಿಮಠ, ಮಂಜುಳಾ ದಾಸರ, ಅಂಜಲಿ ಕಲಾಲ, ವಂದನಾ ಕಲ್ಮನಿ ಸಿಬ್ಬಂದಿಗಳಾದ ಲಕ್ಷ್ಮೀ ಕಮಡೊಳ್ಳಿ, ಸೈನಾಜಬಾನು ರೋಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


