ಬಳ್ಳಾರಿ, ಏ.11..ಇಲ್ಲಿನ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ಹಲವು ತಿಂಗಳುಗಳಿಂದ ಖಾಲಿಯಾಗಿದ್ದು, ಇದುವರೆಗೆ ನೇಮಕಾತಿ ನಡೆಯದಿರುವುದು ಸ್ಥಳೀಯ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ಹಲವಾರು ದಶಕಗಳಿಂದ ವಕ್ಫ್ ಬೋರ್ಡ್ನಲ್ಲಿ ಕೆಲವೇ ಸಮುದಾಯಗಳಿಗೆ ಮಾತ್ರ ಅವಕಾಶ ಸಿಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸಮಾನ ಪ್ರತಿನಿಧಿತ್ವ ನೀಡಬೇಕು ಎಂಬ ಬೇಡಿಕೆ ಇದೀಗ ಜೋರಾಗಿದೆ. ಪಿಂಜಾರ್, ನದಾಫ್ ಸಮುದಾಯಕ್ಕೆ ಈ ಬಾರಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಜಮಾತ್-ಎ-ಮನ್ಸೂರಿ ಸಂಘಟನೆಗಳ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಬಿ.ಎಂ. ರಫಿ ಈ ಕುರಿತು ಪತ್ರಿಕಾ ಹೇಳಿಕೆ ನೀಡಿ. ಪಿಂಜಾರ್/ನದಾಫ್ ಸಮುದಾಯವು ಸಮಾಜ ಸೇವೆ, ವಕ್ಫ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆದರೂ ಪ್ರಮುಖ ಹುದ್ದೆಗಳಲ್ಲಿ ನಮ್ಮ ಸಮುದಾಯಕ್ಕೆ ಅವಕಾಶ ಸಿಗದಿರುವುದು ವಿಷಾದನೀಯ,
“ಸಮಾನ ಹಕ್ಕುಗಳ ಅಡಿಯಲ್ಲಿ ಈ ಬಾರಿ ನಮ್ಮ ಸಮುದಾಯದ ಅರ್ಹ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡಬೇಕು. ಸರ್ಕಾರ ನ್ಯಾಯಯುತ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ,” ಎಂದು ಎಚ್ಚರಿಸಿದ್ದಾರೆ.


