ಸಿರುಗುಪ್ಪ, ಏ.11 ‘ಎಡೆಯೂರು ತೋಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು ಐತಿಹಾಸಿಕ ಪುರುಷರು’ ಎಂದು ಪಾಲ್ತೂರು ಕಲ್ಲುಹೊಳೆ ಸಂಸ್ಥಾನ ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.
ತಾಲ್ಲೂಕಿನ ನಾಗರಹಾಳು ಗ್ರಾಮದ ಶ್ರೀಬೃಹನ್ಮಠದಲ್ಲಿ ಏಕೀಕರಣ ಹೋರಾಟಗಾರರಾದ ಲಿಂಗೈಕ್ಯ ಶರಣ ದೊಡ್ಡಯ್ಯಶಾಸ್ತ್ರಿಗಳ ಮತ್ತು ಲಿಂಗೈಕ್ಯ ಬಸವಮ್ಮ ಅವ್ವನವರ ಪುಣ್ಯಾರಾಧನೆ ಮತ್ತು ರಥೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳ ಪುರಾಣ ಪ್ರವಚನ ಉದ್ಘಾಟಿಸಿ, ಲೋಕದ ಜನರ ಅಧರ್ಮ, ಅನ್ಯಾಯಗಳನ್ನು ತಿದ್ದುವುದಕ್ಕೋಸ್ಕರ ಸಿದ್ಧಲಿಂಗೇಶ್ವರರು ಉದಯಿಸಿದರು ಎಂದು ಅಭಿಪ್ರಾಯಪಟ್ಟರು.
‘ನೈತಿಕ, ಧಾರ್ಮಿಕ, ತಾತ್ವಿಕ ಚಿಂತನೆಗಳನ್ನು ಜಾಗೃತಗೊಳಿಸಿದವರು ಸಿದ್ಧಲಿಂಗೇಶ್ವರರು’ ಎಂದು ಆಂಧ್ರಪ್ರದೇಶದ ಆದೋನಿಯ ಮಂಡಗಿರಿ ಕಲ್ಮಠದ ಗುರುಸಿದ್ಧದೇವರು ತಿಳಿಸಿದರು.
ಗಡಿನಾಡ ಸಾಹಿತಿ ನಾ.ಮ. ಮರುಳಾರಾಧ್ಯರ ಪುರಾಣ ಪ್ರಚಚನ, ನಾ.ಮ. ಜಗದೀಶ್ ಗವಾಯಿಗಳ ಪುರಾಣ ವಾಚನ, ಧಾರವಾಡ ಪ್ರಸನ್ನಕುಮಾರ ಹಿರೇಮಠ ವಾಯೋಲಿನ್ಗೆ ವಂದಲಿ ಬಸವರಾಜ ಹೂಗಾರ್ ತಬಲಾಸಾಥ್ ನೀಡಿದರು.
ಶರಣ ಬಸವರಾಜಯ್ಯತಾತ, ಶ್ರೀಕಂಠಯ್ಯತಾತ, ಎನ್.ಎಂ. ಕಲಿಗಣನಾಥ, ಚಂದ್ರಗೌಡ, ಹುಸೇನಪ್ಪ, ಹೊನ್ನೂರಸಾಬ್, ಶ್ರೀಮಠದ ಭಕ್ತರು, ಗ್ರಾಮಸ್ಥರು ಹಾಜರಿದ್ದರು


