ಬಳ್ಳಾರಿ10:: ಕನ್ನಡ ಕಲಿಸಲು ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ಸರ್ಕಾರ ತೀವ್ರ ಗಮನ ಹರಿಸಬೇಕೆಂದು ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವೈದ್ಯ ಡಾ. ಅರವಿಂದ ಪಟೇಲ್ ತಿಳಿಸಿದರು.
ವೀರಶೈವ ಮಹಾವಿದ್ಯಾಲಯ, ಬಳ್ಳಾರಿ ಕನ್ನಡ ವಿಭಾಗ ಹಾಗೂ ಕವನ ಪ್ರಕಾಶನ, ಕೊಟ್ಟೂರು ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ 2025ನೇ ಸಾಲಿನ ‘ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಭಾಜನರಾದ ನಿಷ್ಠಿ ರುದ್ರಪ್ಪ ಅವರ “ಸ್ವಾದ ಬೇಕ್ರಿ” ಪ್ರಬಂಧ ಸಂಕಲನ ಬಿಡುಗಡೆ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡದಲ್ಲಿ ಲಲಿತ ಪ್ರಬಂಧ ಬರೆಯುವ ಹವ್ಯಾಸವನ್ನು ಉಪನ್ಯಾಸಕವರ್ಗ ಮಾಡಿ ಕನ್ನಡದ ಸೇವೆಗೆ ಸಿದ್ದರಾಗಬೇಕು. ಈ ಮೂಲಕ ಮುಂಬರುವ ಸಾಹಿತ್ಯ ಸಮ್ಮೇಳನ ಸಭಾಂಗಣದಲ್ಲಿ ತೊಡಗಬೇಕು ಎಂದರು.
ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿ.ಬಿ. ಚಿಲ್ಕರಾಗಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ,”ಸ್ವಾದ ಬೇಕ್ರೀ’ ಕೃತಿಯು ಸ್ಥಳೀಯರನ್ನು, ಸ್ಥಳೀಯ ವಿಚಾರಗಳನ್ನೇ ಸ್ವಾದಿಷ್ಟವಾಗಿ ಬರೆದಿದ್ದಾರೆ. ವ್ಯಕ್ತಿನಿಷ್ಠವಾಗಿದ್ದ ಕೃತಿ ಉಳಿಯುವುದಿಲ್ಲ ಆದರೆ ವಸ್ತುನಿಷ್ಟವಾಗಿದ್ದು ಉಳಿಯುತ್ತದೆ ಇದಕ್ಕೆ ಸಾಕ್ಷಿ ಈ ಕೃತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಲಲಿತ ಪ್ರಬಂಧಗಳ ವಿಷಯ ವಸ್ತು ಅಗಾಧವಾಗಿದ್ದು ಇದು ಆಳವಾದ ಚಿಂತನೆ ಹೊಂದಿವೆ. ಸ್ವಾದ ಇದ್ದರೆ ಮಾತ್ರ ಸುನಾದ ಹೊರಡುತ್ತದೆ. ಪ್ರತಿ ಹಳ್ಳಿಗಳ ಹರಟೆಕಟ್ಟೆಗಳು ಅನುಭವಿಗಳ ಅಪಾರ ಜ್ಞಾನ ಹಂಚಿಕೆ ಮಾಡುವ ಅನುಭವ ನೀಡುತ್ತವೆ’ ಎಂದು
ಕಥೆಗಾರ ವೀರೇಂದ್ರ ರಾವಿಹಾಳ್ ಪುಸ್ತಕ ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಬಳ್ಳಾರಿಯ ಸಾಹಿತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಬ್ದುಲ್ ಹೈ ತೋರಣಗಲ್ಲು, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಶರಣಬಸವ, ಉತ್ತಮ ಎನ್.ಎಸ್.ಎಸ್. ಅಧಿಕಾರಿ ಪ್ರಶಸ್ತಿ ಪುರಸ್ಕೃತ ಭ್ರಮರಾಂಭ ಯಾಟಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೀರಶೈವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಹುಕಾರ ಸತೀಶಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ನಿಷ್ಠಿ ರುದ್ರಪ್ಪ ಮತ್ತು ಅಬ್ದುಲ್ ಹೈ ಅವರಿಗೆ ಸಾಹಿತ್ಯ ಶ್ರೀ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು.
ನಿವೃತ್ತ ಪ್ರಾಚಾರ್ಯ ಜೆ ಜಯಪ್ರಕಾಶ ಗೌಡ, ಕಸಾಪ ಮಾಜಿ ಅಧ್ಯಕ್ಷ ಹಂಪನಗೌಡ, ಕವನ ಪ್ರಕಾಶನ ಸಂಸ್ಥೆಯ
ಅಜಯ್ ಬಣಕಾರ, ಕಾರದಪುಡಿ ಮುದ್ಧನಗೌಡ ಭಾಗವಹಿಸಿದ್ದರು. ಪ್ರಾಂಶುಪಾಲರಾದ ಜಿ. ಮಲ್ಲನಗೌಡ ಸ್ವಾಗತಿಸಿದರು. ಡಾ. ನೀಲಮ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


