ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಶ್ರೀ ಶಂಕರಲಿಂಗಶ್ವರ ಮಹಾ ರಥೋತ್ಸವ ಬುಧವಾರದಂದು ಸಂಜೆ ಮೂಲಾ ನಕ್ಷತ್ರದ ಶುಭ ಮಹೋರ್ತದಲ್ಲಿ ನೆರೆದ ಸಹಸ್ರಾರು ಭಕ್ತರ ಜಯಘೋಷಗಳೊಂದಿಗೆ ಸಂಭ್ರಮದಿಂದ ನೇರವೇರಿತು.
ಬಂಥನಾಳದ ಪೂಜ್ಯ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಯರನಾಳದ ಪೂಜ್ಯ ಶ್ರೀ ಗುರು ಸಂಗನಬಸವ ಮಹಾಸ್ವಾಮೀಜಿ, ಇಟಗಿ ಪೂಜ್ಯರು, ಶಿರವಾಳದ ಸೋಮನಿಂಗ ಮಹಾರಾಜರು ಸೇರಿದಂತೆ ವಿವಿಧ ಪೂಜ್ಯರ ಸಾನಿಧ್ಯದಲ್ಲಿ ನಡೆದ ನೋಡಿ ಕಂಣ್ತುಂಬಿಕೊಳ್ಳಲು ನೆರೆಯ ರಾಜ್ಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಭಾಗದ ಸಹಸ್ರಾರು ಭಕ್ತರು ಆಗಮಿಸಿದ್ದರು. ರಥೋತ್ಸವದ ಸಂದರ್ಭದಲ್ಲಿ ಭಕ್ತರು ಬಾಳೆಹಣ್ಣು, ಉತ್ತತ್ತಿ, ಖಾರಿಕ ರಥದ ಮೇಲೆ ಎಸೆದು ಭಕ್ತಿ ಸಮಾರ್ಪಿಸಿದರು.
ಹೆಚ್ಚಿನ ಸಂಖ್ಯೆಯ ಪೊಲೀಸ್ ಬಿಗಿ ಭದ್ರತೆ, ಸ್ವಯಂ ಸೇವಕರ ಸುರಕ್ಷತಾ ಸೇವೆಯ ಮಧ್ಯೆ, ಸೂರ್ಯನು ತಾಯಿಯ ಮಡಿಲು ಸೇರುವ ಘಳಿಗೆಯಲ್ಲಿ ಭಕ್ತರ ಜಯಘೋಷದೊಂದಿಗೆ ಸರಾಗವಾಗಿ ಚಲಿಸಿದ ರಥವನ್ನು ನೋಡುವದೇ ಆನಂದ. ಈ ರಥವು ಚಲಿಸುತ್ತ ಕೂಗಳತೆಯ ದೂರದ ಬಸವಣ್ಣನ ಕಟ್ಟೆಯ ವರೆಗೆ ತಲುಪಿ ಮರಳಿ ಮೂಲ ಸ್ಥಳ ತಲುಪಿ ಉತ್ಸವ ಯಶಸ್ವಿಗೊಂಡಿತು.
ವರ್ಷದಲ್ಲಿ ಒಂದು ಬಾರಿ ನಡೆಯುವ ಈ ಉತ್ಸವ ನೋಡಲು ಸರ್ವ ಜನಾಂಗದ ಭಕ್ತರು ಈ ಬಾರಿ ನದಿ ಸಾಗರವನ್ನು ಸೇರುವ ರೀತಿಯಲ್ಲಿ ರೈಲು, ಬಸ್, ಬೈಕ್ ಸೇರಿದಂತೆ ಇಲ್ಲಿ ಸಮಾವೇಶಗೊಂಡು ಭಾವೈಕ್ಯತೆಯ ಸಂದೇಶ ಸಾರಿದರು.
ಕ್ಷೇತ್ರಕ್ಕೆ ಬಂದ ಭಕ್ತರು ಪೂಜ್ಯರ ದರ್ಶನ ಪಡೆದು ಮಠದಲ್ಲಿ ನಿರಂತರ ದಾಸೋಹ ಕೇಂದ್ರದಲ್ಲಿ ಅನ್ನ ಪ್ರಸಾದ ಸವಿದು ಪುನೀತಾರಾದರು.


