ಕೊಪ್ಪಳ ಜಿಲ್ಲಾದ್ಯಂತ ಎಲ್ಲ ಕಡೆಗೂ ಸಮರ್ಪಕ ನೀರು ಪೂರೈಕೆಯಾಗಲಿ: ಜಿಲ್ಲಾಧಿಕಾರಿ ಡಾ.ಸುರೇಶ ಬಿ ಇಟ್ನಾಳ ನಿರ್ದೇಶನ

Pratibha Boi
ಕೊಪ್ಪಳ ಜಿಲ್ಲಾದ್ಯಂತ ಎಲ್ಲ ಕಡೆಗೂ ಸಮರ್ಪಕ ನೀರು ಪೂರೈಕೆಯಾಗಲಿ: ಜಿಲ್ಲಾಧಿಕಾರಿ ಡಾ.ಸುರೇಶ ಬಿ ಇಟ್ನಾಳ ನಿರ್ದೇಶನ
WhatsApp Group Join Now
Telegram Group Join Now
ಕೊಪ್ಪಳ ಏಪ್ರಿಲ್ 08 : ಕೊಪ್ಪಳ ಜಿಲ್ಲೆಯ ಪಟ್ಟಣ, ನಗರ ಪ್ರದೇಶ ಮತ್ತು ಎಲ್ಲಾ ಗ್ರಾಮ ಪಂಚಾಯತ್‌ಗಳು ಸೇರಿದಂತೆ ಜಿಲ್ಲೆಯಾದ್ಯಂತ ಯಾವುದೇ ಕಡೆಗಳಲ್ಲಿ ಕಡಿಯುವ ನೀರಿನ ಸಮಸ್ಯೆಯಾಗಬಾರದು. ಬೇಸಿಗೆಯ ಈ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಮೊದಲಾದ್ಯತೆ ನೀಡಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ. ಇಟ್ನಾಳ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್‌ನ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಏಪ್ರೀಲ್ 8ರಂದು ಕೊಪ್ಪಳ ಸೇರಿದಂತೆ ವಿವಿಧ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬವಣೆ ಎದುರಾಗಬಹುದು ಎಂಬುದು ಗೊತ್ತಾದ ಕೂಡಲೇ ಅಲ್ಲಿ ಕುಡಿಯುವ ನೀರು ಸರಬರಾಜಿಗೆ ರ‍್ಯಾಯ ವ್ಯವಸ್ಥೆ ಮಾಡಿಕೊಂಡಿರಬೇಕು. ಅಂತಹ ಕಡೆಗಳಲ್ಲಿ ಮುಂಚಿತವಾಗಿಯೇ ಖಾಸಗಿ ಬೋರವೆಲ್ ಗುರುತಿಸಬೇಕು. ಮಾಲೀಕರೊಂದಿಗೆ ಮುಂಚಿತವಾಗಿಯೇ ಒಪ್ಪಂದ ಪತ್ರ ಮಾಡಿಕೊಂಡಿರಬೇಕು. ಬೋರವೆಲ್ ಮಾಲೀಕರು ಒಪ್ಪದಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿಗಳು ಆಯಾ ಪಿಡಿಓಗಳಿಗೆ ಸೂಚನೆ ನೀಡಿದರು.
ಬೇರೆ ಬೇರೆ ಪತ್ರಿಕೆಗಳಲ್ಲಿ ನೀರಿನ ಬವಣೆ ಬಗ್ಗೆ ವರದಿಯಾಗುತ್ತಿವೆ. ಇದನ್ನು ಗಮನಿಸಿದ್ದೀರಾ ಎಂದು ಅಧಿಕಾರಿಗಳಿಗೆ ಕೇಳಿದ ಜಿಲ್ಲಾಧಿಕಾರಿಗಳು, ಆಯಾ ತಾಲೂಕಿನ ತಹಸೀಲ್ದಾರರು ನಿರಂತರವಾಗಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಆಯಾ ಗ್ರಾಮಗಳ ಕುಡಿಯುವ ನೀರಿನ ಪರಿಸ್ಥಿತಿಯನ್ನು ಅವಲೋಕಿಸಬೇಕು ಎಂದು ಎಲ್ಲ ತಹಸೀಲ್ದಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಬೇಸಿಗೆಯ ಅವಧಿಯಲ್ಲಿ ಯಾವುದೇ ಹಳ್ಳಿಗಳಲ್ಲಿ ನೀರಿನ ಕೊರತೆಯಾಗದಂತೆ ನಿರಂತರ ನಿಗಾ ವಹಿಸಬೇಕು ಎಂದು ಎಲ್ಲ ಪಿಡಿಓಗಳಿಗೆ ಸೂಚನೆ ನೀಡಿದರು. ಎಲ್ಲ ಪಿಡಿಓಗಳ ಮೇಲೆ ಸೂಕ್ತ ಮೇಲ್ವಿಚಾರಣೆ ನಡೆಸಲು ತಾಪಂ ಇಓಗಳಿಗೆ ನಿರ್ದೇಶನ ನೀಡಿದರು.
*ಅನುದಾನ ಬೇಕಾದರೆ ತಿಳಿಸಿ:* ಪಂಚಾಯತವಾರು ಪರಿಶೀಲನೆ ವೇಳೆ, ಕುಡಿಯುವ ನೀರು ಪೂರೈಕೆಗೆ ಅನುದಾನ ಕೊರತೆ ಇದೆಯಾ? ಎಂದು ಕೇಳಿದ ಜಿಲ್ಲಾಧಿಕಾರಿಗಳು, ಪಂಚಾಯಿತಿಯ ಸ್ಥಳೀಯ ಅನುದಾನ, 15ನೇ ಹಣಕಾಸಿನ ಅನುದಾನ ಅಥವಾ ಕರ ವಸೂಲಾತಿಗೆ ಗಮನ ಹರಿಸಿ ಅನುದಾನ ಲಭ್ಯತೆಗೆ ಒತ್ತು ಕೊಡಬೇಕು. ಅನುದಾನ ಇಲ್ಲ ಎಂದು ನೆಪ ಹೇಳಿ ನಿರ್ಲಕ್ಷ್ಯ ಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಅವಶ್ಯಕತೆ ಇದ್ದಲ್ಲಿ ಅನುದಾನ ಬೇಡಿಕೆಯ ಪತ್ರವನ್ನು ಕೂಡಲೇ ಸಲ್ಲಿಸಬೇಕು. ಪ್ರತಿಯೊಂದು ವಿಷಯವನ್ನು ಕಡ್ಡಾಯವಾಗಿ ಜಿಲ್ಲಾ ಪಂಚಾಯತ್ ಸಿಇಓ ಅವರ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿಗಳು ಪಿಡಿಓಗಳಿಗೆ ಸೂಚನೆ ನೀಡಿದರು. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಹಣಕಾಸಿನ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
*ನಿಯಮಿತವಾಗಿ ಸಭೆ ನಡೆಸಿ:* ಜಿಲ್ಲೆಯ ಎಲ್ಲ ಪಂಚಾಯತಗಳಲ್ಲಿ ಗ್ರಾಮ ನೀರು ನೈರ್ಮಲ್ಯ ಸಮಿತಿ ಸಭೆಗಳು ನಿಯಮಿತವಾಗಿ ನಡೆಯಬೇಕು. ಈ ಸಭೆಗಳಲ್ಲಿ ಕರ ವಸೂಲಾತಿ ಮತ್ತು ಕುಡಿಯುವ ನೀರಿನ ಪರಿಸ್ಥಿತಿಯ ಬಗ್ಗೆ ಗಂಭೀರವಾಗಿ ಚರ್ಚಿಸಿದಲ್ಲಿ ಯಾವುದೇ ಗ್ರಾಮಗಳಲ್ಲಿ ದಿಢೀರ್ ಎಂದು ನೀರಿನ ಸಮಸ್ಯೆ ಉದ್ಬವಿಸಲಾರದು ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.
*ನೀರಿನ ಪರೀಕ್ಷೆ ಕಡ್ಡಾಯ:* ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲ್ಮಟ್ಟದ ಜಲಾಗಾರಗಳು ಸದಾಕಾಲ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು. ಕಡ್ಡಾಯವಾಗಿ ಪರೀಕ್ಷಿಸಿಯೇ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿಗಳು, ಎಲ್ಲ ಪಿಡಿಓಗಳು ಮತ್ತು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ನಗರ ಪ್ರದೇಶದಲ್ಲಿ ಸಮಸ್ಯೆ ಇಲ್ಲ:* ಕೊಪ್ಪಳ ಹಾಗೂ ಗಂಗಾವತಿ ನಗರಸಭೆ, ಕಾರಟಗಿ ಹಾಗೂ ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ, ಕುಕನೂರ, ಕನಕಗಿರಿ, ಭಾಗ್ಯನಗರ, ತಾವರಗೇರಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ ಎಂದು ಪೌರಾಯುಕ್ತರು, ಮುಖ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
*ಕಾರಣ ಕೇಳಿ ನೋಟೀಸ್ ಜಾರಿ:* ತುಂಗಭದ್ರಾ ಡ್ಯಾಮನಿಂದ ಕಾಲುವೆಗೆ ನೀರು ಹರಿಸಿದ್ದು ಈ ಮೊದಲೇ ನೀಡಿದ ಸೂಚನೆಯಂತೆ ಕಾಲುವೆ ವ್ಯಾಪ್ತಿಯ ಕೆರೆಗಳ ಭರ್ತಿ ಕಾರ್ಯ ನಡೆದಿದೆಯೇ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರಿಗೆ ಪ್ರಶ್ನಿಸಿದ ಜಿಲ್ಲಾಧಿಕಾರಿಗಳು, ಕಾಲುವೆಗೆ ನೀರು ಹರಿಸಿದ್ದರು ಸಹ ಕೆರೆ ಭರ್ತಿಗೆ ನಿರ್ಲಕ್ಷ್ಯ ವಹಿಸಿದ ಆರ್‌ಡಬ್ಲ್ಯುಎಸ್‌ನ ಗಂಗಾವತಿಯ ಸಹಾಯಕ ಅಭಿಯಂತರರಿಗೆ ಕಾರಣ ಕೇಳಿ ನೋಟೀಸ್ ಜಾರಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಟಿ.ಕೃಷ್ಣಮೂರ್ತಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ  ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ಯಲಬುರ್ಗಾ, ಕುಕನೂರ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶ, ಸಣ್ಣ ನೀರಾವರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು, ಎಲ್ಲ ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ದರು.
WhatsApp Group Join Now
Telegram Group Join Now
Share This Article