ಸಮಾಜ ಸುಧಾರಣೆಯ ಹರಿಕಾರ ಬಾಬು ಜಗಜೀವನರಾಂ : ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ

Pratibha Boi
ಸಮಾಜ ಸುಧಾರಣೆಯ ಹರಿಕಾರ ಬಾಬು ಜಗಜೀವನರಾಂ : ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ
WhatsApp Group Join Now
Telegram Group Join Now

ಬಳ್ಳಾರಿ,ಏ.07:ಬಾಬು ಜಗಜೀವನರಾಂ ಅವರು ಬುದ್ಧ, ಬಸವ, ಅಂಬೇಡ್ಕರರAತೆ ಸಮಾಜ ಸುಧಾರಣೆಯ ಧೋರಣೆಗಳನ್ನು ಸದಾಕಾಲ ಹೊಂದಿದ್ದರು ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ್ ಅವರು ಹೇಳಿದರು.
ಸೋಮವಾರ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ವಿವಿಯ ಬಾಬು ಜಗಜೀವನರಾಂ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ ಹಾಗೂ ಬೆಂಗಳೂರು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಪ.ಜಾ/ ಪ.ಪಂ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮೂರು ದಿನಗಳ ಸಂಶೋಧನಾ ವಿಧಾನ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಳಾರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಮೌಢ್ಯ ಆಚರಣೆಯ ಪದ್ಧತಿಗಳಾದ ದೇವದಾಸಿ, ಜಾತಿ ಪದ್ಧತಿ, ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆಯಂತಹ ಹಲವಾರು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿ ಅವುಗಳ ನಿರ್ಮೂಲನೆಗೆ ಬಾಬೂಜಿ ಅವರು ನಿರಂತರ ಹೋರಾಟ ಮಾಡಿದ್ದರು ಎಂದು ತಿಳಿಸಿದರು.
ಸಂಶೋಧನಾ ವಿದ್ಯಾರ್ಥಿಗಳು ಬಾಬು ಜಗಜೀವನರಾಂ ಅವರ ಜೀವನ ಸಾಧನೆಯನ್ನು ಅಧ್ಯಯನ ಮಾಡಿ, ಅವರಲ್ಲಿದ್ದ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಲಿಡ್ಕರ್ ಅಭಿವೃದ್ಧಿ ನಿಗಮವು ತನ್ನ ಅಧೀನಕ್ಕೆ ಒಳಪಡುವ ಉಪಜಾತಿಗಳ ಫಲಾನುಭವಿಗಳಿಗೆ, ಮಹಿಳೆಯರಿಗೆ ವಿಶೇಷ ತರಬೇತಿ ನೀಡುವುದು, ವಿವಿಧ ಕೌಶಲ್ಯಗಳ ತರಬೇತಿಗೆ ಬೆಂಗಳೂರು, ತಮಿಳುನಾಡು ಹಾಗೂ ಇಂಡೋನೇಷ್ಯಾ ದೇಶಕ್ಕೆ ಕಳುಹಿಸಿ ಕೈಗಾರಿಕಾ ತರಬೇತಿ ಒದಗಿಸುತ್ತಿದ್ದು, ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನೀಲ್ ಕುಮಾರ್ ಅವರು ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ, ಸಂಶೋಧನೆಗೆ ಎಐ ಮತ್ತು ಮಷಿನ್ ಲರ್ನಿಂಗ್ ನಂತಹ ಸಾಧನಗಳನ್ನು ಬಳಸುವ ಮೂಲಕ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ಯಾವುದೇ ಮಾದರಿಯ ಸಂಶೋಧನೆಗೆ ವಸ್ತುನಿಷ್ಠತೆ, ನಿರ್ದಿಷ್ಟ ಉದ್ದೇಶಗಳು ಹಾಗೂ ನೀತಿ ಸಂಹಿತೆ ಪಾಲಿಸಬೇಕು. ಇದರಿಂದ ಸಂಶೋಧನೆಯಲ್ಲಿ ನೈಜವಾದ ದತ್ತಾಂಶಗಳು ಸಂಶೋಧನೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಎಂದರು.
ವಿವಿಯ ಕುಲಪತಿ ಪ್ರೊ.ಎಂ ಮುನಿರಾಜು ಅವರು ಮಾತನಾಡಿ, ರಾಜ್ಯದ ಬಹುತೇಕ ವಿವಿಗಳಲ್ಲಿರುವ ಅಧ್ಯಯನ ಪೀಠಗಳು ಆಳವಾದ ಮತ್ತು ಸ್ಥೂಲವಾದ ಉತ್ಕೃಷ್ಟ ಸಂಶೋಧನೆಯನ್ನು ಹೊರ ತರಲು ಮುಂದಾಗಬೇಕು ಎಂದು ತಿಳಿಸಿದರು.
ಬಾಬು ಜಗಜೀವನರಾಂ ಅವರ ಕುರಿತು ಅತ್ಯುತ್ತಮ ಸಂಶೋಧನಾ ಲೇಖನ ಮಂಡಿಸುವ ಸಂಶೋಧನಾ ವಿದ್ಯಾರ್ಥಿಗೆ ಪೀಠದ ವತಿಯಿಂದ 10 ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು.
ವಿವಿಯ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಶಾಲೆಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ವರ್ಷಕ್ಕೆ ಒಂದು ಲಕ್ಷ ರೂ. ವ್ಯಯಿಸಲು ಕಾರ್ಯಯೋಜನೆ ಸಿದ್ಧಪಡಿಸುವಂತೆ ಪೀಠದ ಸಂಯೋಜಕರಿಗೆ ಈ ಸಂದರ್ಭದಲ್ಲಿ ಸೂಚಿಸಿದರು.
ಕಾರ್ಯಾಗಾರದ ಸಂಯೋಜಕ ಡಾ.ತಿಪ್ಪೇಸ್ವಾಮಿ ಎಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಡಾ.ಸುಷ್ಮಾ ಜೋಗನ್ ನಿರೂಪಿಸಿದರು. ಡಾ.ಸಂತೋಷ ಅತಿಥಿಗಳನ್ನು ಸ್ವಾಗತಿಸಿದರು. ಸಂಶೋಧನಾರ್ಥಿ ನರಸಿಂಹ ವಂದಿಸಿದರು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮೂರು ದಿನಗಳ ಸಂಶೋಧನಾ ವಿಧಾನ ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ತಾಂತ್ರಿಕ ಗೋಷ್ಠಿಗಳು ನಡೆಯಲಿದ್ದು, ಸಂಶೋಧನಾ ಕ್ಷೇತ್ರದ ಪರಿಣಿತರು ಉಪನ್ಯಾಸ ನೀಡಲಿದ್ದಾರೆ.
ವಿವಿಯ ಎಲ್ಲ ನಿಕಾಯದ ಡೀನರು, ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

WhatsApp Group Join Now
Telegram Group Join Now
Share This Article